Thursday, April 23, 2020

 ಜೀವನದಲ್ಲಿ ಬ್ರೇಕ್ ಡೌನ್ ಎದುರಿಸುತ್ತಿರುವ ಬ್ರೇಕಿಂಗ್ ಸುದ್ದಿ ಕೊಡುವ ತಾಲೂಕು ಮಟ್ಟದ ವರದಿಗಾರರು

ಅಭದ್ರತೆಯಲ್ಲಿರುವ ವರದಿಗಾರರುಗಳಿಗೆ ಸರಕಾರದಿಂದ ಜೀವನ ಭದ್ರತೆ ಸಿಗಬಹುದೆ?

ಬರಹ: ಸಂದೇಶ್.ಎಸ್.ಜೈನ್, ದಾಂಡೇಲಿ
ವರದಿಗಾರರು,
ವಿಜಯನಗರ, ದಾಂಡೇಲಿ-581325
ಉತ್ತರಕನ್ನಡ ಜಿಲ್ಲೆ, ಕರ್ನಾಟಕ.
ಮೊ:9620595555, 7349443043
Email: sandesh.kanyady55@gmail.com
blog: sandeshnewspage.blogspot.com

ದಾಂಡೇಲಿ : ಅವನ ಮನೆಯಲ್ಲಿ ಹೆಂಡತಿ ಅಥವಾ ಅಮ್ಮ ಅನಾರೋಗ್ಯಗೊಂಡಿದ್ದರೂ, ಆರ್ಥಿಕ ಆಡಚಣೆಯಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಯಾತನೆಯ ಸ್ಥಿತಿ. ಅದೇ ಸಂದರ್ಭದಲ್ಲಿ ಇಲ್ಲೊಬ್ಬ ಬಡವ ಕ್ಯಾನ್ಸರ್ ಪೀಡಿತನಾಗಿದ್ದು, ಅವನು ಬದುಕುಳಿಯಬೇಕಾದರೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು ಹಣದ ತೊಂದರೆಯಿದೆ,  ದಯವಿಟ್ಟು ದಾನಿಗಳ ನೆರವಿಗಾಗಿ ಸುದ್ದಿ ಮಾಡುವಿರ ಎಂದು ಮೊಬೈಲ್ ಕರೆ ಬಂದು ಮಾತಾಡಿಟ್ಟ ತಕ್ಷಣವೆ  ಬೈಕನ್ನೇರಿ ಅನಾರೋಗ್ಯ ಪೀಡಿತನಲ್ಲಿಗೆ ಭೇಟಿ ಕೊಟ್ಟು, ಅವನ ಮಾಹಿತಿ ಪಡೆದು ಶಸ್ತ್ರಚಿಕಿತ್ಸೆಗೆ ಸಹಾಯವನ್ನು ಯಾಚಿಸುವ ವರದಿ ಮಾಡಿ ಆತ ಬದುಕುವಂತಾಗಲೂ ಒದ್ದಾಡುವ ತಾಲೂಕು ಮಟ್ಟದ ವರದಿಗಾರರು ಬಿದ್ದಾಗ ಅವರನ್ನು ಎಬ್ಬಿಸುವವರು ಯಾರು? ಎಂಬ ಪ್ರಶ್ನೆ ಎಲ್ಲ ತಾಲೂಕು ಮಟ್ಟದ ಪತ್ರಕರ್ತರದ್ದಾಗಿದೆ.

ಹೌದು ಸ್ನೇಹಿತರೇ, ಮಹಾಮಾರಿ ಕೊರೊನಾದಿಂದ ಭಾರತ ಲಾಕ್ ಡೌನ್ ಆಗಿದೆ. ಆದರೆ ತಾಲೂಕು ಮಟ್ಟದ ವರದಿಗಾರರ ಜೀವನ ಮಾತ್ರ ಸದಾ ಬ್ರೇಕ್ ಡೌನ್ ನಲ್ಲಿರುವುದು ದುರ್ದೈವ್ಯ. ಈಗ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳು, ಜನಪ್ರತಿನಿಧಿಗಳು ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಆಹಾರ ವಸ್ತುಗಳನ್ನು ದಾನ ಮಾಡುತ್ತಾರೆ. ಸುದ್ದಿಗಾಗಿ ನಾವು ಹೋಗುತ್ತೇವೆ. ಪೋಟೊ ಕ್ಲಿಕ್ಕಿಸಿ ಬಂದು ಸುದ್ದಿ ಮಾಡುತ್ತೇವೆ. ಯಾವ ಬಡವರಿಗೆ ಅಕ್ಕಿ, ಬೆಳೆ ಕೊಡಲಾಗುವ ಸುದ್ದಿ ಮಾಡುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರ ಮನೆಯಲ್ಲಿ ಬೆಳೆ-ಕಾಳುಗಳ ಡಬ್ಬ ಖಾಲಿಯಾಗಿದ್ದು ಗೊತ್ತಿದ್ದರೂ ಮಾನ ಮರ್ಯಾದಿಗಂಜಿ ಆ ದಾನಿಗಳ ಬಳಿ ಕೈ ಚಾಚುವುದಿಲ್ಲ. ಇತ್ತ ದಾನಿಗೂ ವರದಿಗಾರರಿಗೆ ಕೊಡಲು ಸರಿಯಾಗುತ್ತೆಯೇ ಎಂಬ ಸಂಕೋಚ. ಈ ಸಂಕೋಚಗಳ ಮಧ್ಯೆ ದಿನ ನಿತ್ಯ ಇನ್ನೊಬ್ಬರ ಬದುಕಿಗೆ ಆಸರೆಯಾಗುವ ವರದಿಗಾರನಿಗೆ ಮಾನಸಿಕ ಬೇಸರವೆ ಬಹುದೊಡ್ಡ ಆಸ್ತಿ.

ತಾಲೂಕು ಮಟ್ಟದ ವರದಿಗಾರರಾದ ನಾವೆ ಅಲ್ಲಿ ಬಡವರು ಇದ್ದಾರೆ, ಇಲ್ಲಿ ಸಂಕಷ್ಟದಲ್ಲಿದ್ದಾರೆ ಎಂದು ಅವರಿವರಿಗೆ ಅವರಿವರು ದಾನಿಗಳಿಂದ ದಾನ ಮಾಡಿಸುವ ಸೇತುವೆಗಳಾಗುತ್ತೇವೆ. ನಾವು ಇನ್ನೊಬ್ಬರ ಬದುಕಿಗೆ ಸಹಾಯದ ಸೇತುವೆಯಾಗುತ್ತೇವೆ. ಆದರೆ ನಮ್ಮ ಮನೆಯ ಸಂಕಷ್ಟಕ್ಕೆ ಸೇತುವೆಯಾಗುವವರು ಯಾರು ಎಂಬ ಪ್ರಶ್ನೆ ಸಹಜವಾಗಿಯೆ ಕಾಡುತ್ತಿದೆ. ಸಮಾಜದಲ್ಲಿ ಗೌರವಯುತವಾದ ಸ್ಥಾನವಿರುವುದರಿಂದ ಅತ್ತ ಆ ವರದಿಗಾರನಿಗೆ ದಾನಿಗಳ ಬಳಿ ಕೈ ಚಾಚಲು ಆಗದು, ಇತ್ತ ಕೊಡುವ ದಾನಿಗೂ ಹೇಗೆ ಕೊಡಲಿ ಎಂಬ ಚಿಂತೆ ಮತ್ತು ಬಡವನಲ್ಲದಿರಬಹುದೆಂಬ ಹಾಗೂ ಕಷ್ಟದಲ್ಲಿರಲಿಕ್ಕಿಲ್ಲ ಎಂಬ ಅಭಿಪ್ರಾಯವಿರುವುದು ಸಹ ಇನ್ನೊಂದೆಡೆ ಎನ್ನುವುದನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲ.

ಸುದ್ದಿಗಾಗಿ ಅಲ್ಲಿ ಇಲ್ಲಿ ಎಂದು ಸಾಕಷ್ಟು ಕಡೆ ಓಡಾಡುತ್ತಿರುತ್ತೇವೆ. ಸುದ್ದಿ ಯಾರ್ದಾದರೂ ನಮ್ಮ ಬೈಕಿಗೆ ಹಾಕುವ ಪೆಟ್ರೋಲ್ ಮಾತ್ರ ನಮ್ಮದೆ ಎನ್ನುವುದು ಸತ್ಯ. ಅದು ಒಂದೊಂದು ಸಲ ಪೆಟ್ರೋಲ್ ಹಾಕಲು ಹಣವಿಲ್ಲದೆ ಕಿಸೆಯಲ್ಲಿ ಕೇವಲ 20 ರೂ ವಿರುವಾಗಲೆ ಪೆಟ್ರೋಲ್ ಖಾಲಿಯಾದರೇ ಪೆಟ್ರೋಲ್ ಪಂಪಿನಲ್ಲಿ ಕನಿಷ್ಟ ಮೊತ್ತದ ಪೆಟ್ರೋಲ್ ಹಾಕಲು ಮುಜುಗರ. ಜನದಟ್ಟನೆ ಖಾಲಿಯಾದ ನಂತರ ಗಡಿಬಿಡಿ ಎಂಬಂತೆ ನಾಟಕವಾಡಿ ಅಂತೂ ಕೊನೆಗೆ 20 ರೂ ಪೆಟ್ರೋಲ್ ಹಾಕೊಂಡು ಹೋಗುವಂತಹ ಸ್ಥಿತಿ ತಾಲೂಕು ಮಟ್ಟದ ವರದಿಗಾರರದ್ದಾಗಿದೆ.
ಬದುಕು ಬರ್ಬದ್-ಆದರೆ ಸುದ್ದಿ ಮಾತ್ರ ಜಬರ್ದಸ್ತ್
ತಾಲೂಕು ಮಟ್ಟದ ವರದಿಗಾರರ ಬದುಕು ಬರ್ಬದಾದರೂ ಸುದ್ದಿ ಮಾತ್ರ ಜಬರ್ದಸ್ತ್ ಎನ್ನುವುದು ಎಲ್ಲರು ಒಪ್ಪಿಕೊಳ್ಳಲೆಬೇಕು. ಒಂದು ಊರಿನ ಅಭಿವೃದ್ಧಿಯಲ್ಲಿ ಆ ಊರಿನ ಪತ್ರಿಕಾ ವರದಿಗಾರರ ಪಾತ್ರ ಬಹಳ ಮುಖ್ಯವಾಗಿದೆ. ಕೇವಲ ಒಂದು ಪೆನ್ನಿನಿಂದ ಅದೇಷ್ಟೋ ಊರಿನ ರಸ್ತೆಗಳು, ಗಟಾರಗಳು, ಶಾಲೆಗಳು ಹೀಗೆ ಸಾರ್ವಜನಿಕ ಕೆಲಸ ಕಾರ್ಯಗಳು ಆಗಿವೆ. ಕೆಲಸ ಮಾಡದ ಜನಪ್ರತಿನಿಧಿಗಳಿಂದ ಇದೇ ವರದಿಗಾರರು ತಮ್ಮ ಹರಿತವಾದ ವರದಿಗಳ ಮೂಲಕ ಕೆಲಸ ಮಾಡಿಸುತ್ತಿರುವುದು ಗೊತ್ತಿರುವ ಸಂಗತಿ. ಇನ್ನೂ ಅವರಿರವರು ಕರೆದಾಗ ಸುದ್ದಿಗೋಷ್ಟಿಗೆ ಹೋಗಿ ಸುಮಾರು ಒಂದೆರೆಡು ಗಂಟೆಗಳವರೆಗೆ ಸುದ್ದಿಗೋಷ್ಟಿಯಲ್ಲಿ ಕುಳಿತು ಅವರು ಹೇಳಿದ್ದನ್ನೆಲ್ಲ ಬರೆದು ಸುದ್ದಿ ಮಾಡುತ್ತೇವೆ. ಆ ಸುದ್ದಿ ಗೋಷ್ಟಿಗೆ ಹೋಗಲು ಪೆಟ್ರೋಲಿಗೆ ಸಾಕಾಗುವಷ್ಟು ಸುದ್ದಿಗೆ ಹಣ ಬರುತ್ತದೆ. ಆದರೆ ನಮ್ಮ ಶ್ರಮದ ಆದಾಯ ಸೊನ್ನೆ ಎನ್ನಲು ಅಡ್ಡಿಯಿಲ್ಲ.

ಇವತ್ತು ರಾಜ್ಯದ ಟಿವಿ ಚಾನೆಲ್ಗಳಲ್ಲಿ ಬ್ರೇಕಿಂಗ್ ಆಗುವ ಬಹುತೇಕ ಸುದ್ದಿಗಳು ನಮ್ಮದೆ. ಆದರೆ ಆ ಸುದ್ದಿ ನಮ್ಮೆದೆಂದು ಹೇಳಲು ಮತ್ತು ಅದಕ್ಕೆ ಸಂಭಾವನೆ ಪಡೆಯಲು ನಮಗೆ ಹಕ್ಕಿಲ್ಲ ಎನ್ನುವುದು ವಾಸ್ತವ ಸತ್ಯ. ಟಿವಿ ನ್ಯೂಸ್ ಚಾನೆಲುಗಳಿಗೆ ಜಿಲ್ಲೆಗೊಬ್ಬರೆ ವರದಿಗಾರರು ಇರುವುದರಿಂದ ಅವರಿಗೆ ಮಿಕ್ಕೆಲ್ಲ ತಾಲೂಕುಗಳ ಸುದ್ದಿ ಮೊಬೈಲುಗಳ ಮೂಲಕ ಮುಟ್ಟಿಸುವವರು ನಮ್ಮಂತಹ ತಾಲೂಕು ವರದಿಗಾರರುಗಳು ಎನ್ನುವುದು ಎಲ್ಲರಿಗೂ ತಿಳಿದಿರಲಿ. ಆದರೆ ಅವರು ಬ್ರೇಕಿಂಗ್ ಕೊಟ್ಟು ಅದರ ಮಹತ್ವ ಕಳೆದುಹೊದ ಮರುದಿನ ನಮ್ಮ ಸುದ್ದಿಗಳು ಬಂದು ಬಿಡ್ತಾವೆ. ಇನ್ನು ಒಂದು ಮಾತು ಹೇಳಬೇಕೆಂದರೇ ಅದೇಷ್ಟೊ ನಮ್ಮ ಸುದ್ದಿಗಳೆ ಅಮಾಯಕರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಕೊಡಿಸುವಲ್ಲಿ ಸಾಕ್ಷಿಯ ರೂಪದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸರಕಾರದ ಗುಪ್ತಚಾರ ಇಲಾಖೆಯು ನೇರವಾಗಿ ಒಪ್ಪಿಕೊಳ್ಳಲಾಗದಿದ್ದರೂ ಅವರು ಸಹ ಹೆಚ್ಚಾನು ಹೆಚ್ಚು ತಾಲೂಕು ಮಟ್ಟದ ವರದಿಗಾರರ ಜೊತೆ ಹೆಚ್ಚಿನ ಓಡನಾಟವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಅಗತ್ಯದ ಮಾಹಿತಿಯನ್ನು ನಮ್ಮಿಂದಲೆ ಪಡೆದುಕೊಳ್ಳುತ್ತಾರೆ.

ಸರಕಾರದ ಯಾವುದೇ ಯೋಜನೆಗಳು ಫಲಪ್ರದಾಯಕವಾಗಲು ತಾಲೂಕು ಮಟ್ಟದ ವರದಿಗಾರರುಗಳ ಪರಿಣಾಮಕಾರಿ ವರದಿಗಳು ಮಹತ್ವಪೂರ್ಣವಾಗಿವೆ. ಹಳ್ಳಿಯಿಂದ ದಿಲ್ಲಿಯವರೆಗೆ ಬದಲಾವಣೆ ತರಬಲ್ಲ ತಾಕತ್ತು ಹೊಂದಿರುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರಿಗೆ ಸಂಸಾರ ನಿರ್ವಹಿಸುವ ತಾಕತ್ತು ಇಲ್ಲದಿರುವುದು ಮಾತ್ರ ದುರಂತ.
ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಎಲ್ಲವೂ ಉಂಟು-ನಮಗೆ ಮಾತ್ರ ಸಂಕಟ ಸದಾ ಉಂಟು
ಸರಕಾರದ ಹಲವಾರು ಯೋಜನೆಗಳು ಕೈ ತುಂಬ ವೇತನ ಪಡೆಯುವ ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ಸೀಮಿತವಾಗುತ್ತಿದೆ. ತಾಲೂಕು ಮಟ್ಟದ ವರದಿಗಾರರು ತನ್ನ ಪಾಡಿಗೆ ತಾನಿದ್ದರೇ ಟಿವಿಯವರು ಬ್ರೇಕಿಂಗ್ ಸುದ್ದಿ ಕೊಡುವುದಾದರು ಹೇಗೆ?. ಕ್ರೈಂ ಸ್ಟೋರಿಗೆ ಸುದ್ದಿಯ ಜಾಡನ್ನು ಹಿಡಿಯಲು ಟಿ.ವಿ ವರದಿಗಾರರಿಗೆ ಆಯಾಯ ತಾಲೂಕಿನ ವರದಿಗಾರರುಗಳ ಸಹಾಯ ಬೇಕೆ ಬೇಕು.  ಸರಕಾರದ ಹಲವಾರು ಯೋಜನೆಗಳು ಕೈ ತುಂಬ ಸಂಬಳ ಪಡೆಯುವ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ದಕ್ಕುತ್ತವೆ. ಅಭದ್ರತೆಯಲ್ಲಿರುವ ನಮಗೆ ಏನು ಸಿಗದೆ ನರಕಯಾತನೆಯ ಬದುಕು ನಮ್ಮದು. ನಮ್ಮನ್ನು ಆಳುವವರಿಗೆ ಆಳುವ ಮುನ್ನ ಆಳುವಂತಾಗಿಸಲು ನಾವೆ ಬೇಕು. ಆದರೆ ಆಳುವ ಸಮಯದಲ್ಲಿ ನಮ್ಮ ನೆನಪು ಇಷ್ಟು ವರ್ಷವಾದರೂ ಬಂದಿಲ್ಲವಲ್ಲ ಯಾಕೆ?. ಅಬ್ಬಬ್ಬಾ ಅಂದ್ರೆ ತಿಂಗಳಿಗೆ ಈಗಲೂ 2 ರಿಂದ 3 ಸಾವಿರ ಸಂಭಾವನೆಯನ್ನಷ್ಟೆ ಪಡೆಯುತ್ತೇವೆ ಎಂಬುವುದು ತಿಳಿದಿರಲಿಕ್ಕಿಲ್ಲವೆ. ಈಗ ತಿಳಿಯಿತ್ತಲ್ಲ, ಓಕೆ ನೋಡೋಣ.
ಸ್ವಸ್ಥ ಸಮಾಜಕ್ಕಾಗಿ ಪಣ ತೊಡುವ ತಾಲೂಕು ವರದಿಗಾರರಿಗೆ ಜೀವನ ಭದ್ರತೆಯ ಅನಿವಾರ್ಯತೆಯಿದೆ:
ಸಮಾಜ ಸ್ವಸ್ಥತೆಗಾಗಿ, ಸಮಾಜದ ಉನ್ನತಿಗಾಗಿ ಸಮಾಜಘಾತುಕರನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಇಂಥಹ ಸಂದರ್ಭಗಳಲ್ಲಿ ಅದೇಷ್ಟೊ ತಾಲೂಕುಮಟ್ಟದ ವರದಿಗಾರರು ಸಾವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಅನೇಕ ವರದಿಗಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ಅಪತ್ತಿಗೆ ಒಳಗಾಗಿ ಸಾವಿಗೀಡಾದ ವರದಿಗಾರನ ಮಡದಿ ತನ್ನ ಮಕ್ಕಳ ಬದುಕಿಗಾಗಿ ಇನ್ನೊಬ್ಬರ ಮನೆಯ ಮುಸುರೆ ತಿಕ್ಕಬೇಕಾದ ಸ್ಥಿತಿ ಬರುವಂತಾಗಿದೆ. ಹೀಗಿರುವಾಗ ಸರಕಾರ ತಾಲೂಕು ಮಟ್ಟದ ವರದಿಗಾರರುಗಳ ಜೀವನ ಭದ್ರತೆಯ ಬಗ್ಗೆ ಸುಯೋಗ್ಯ ಯೋಜನೆಗಳನ್ನು ಅನುಷ್ಟಾನ ಮಾಡಬೇಕಾಗಿದೆ. ಕನಿಷ್ಟ ಕೂಲಿ ಕಾರ್ಮಿಕರಿಗಿಂತಲೂ ಕಡೆಯಾಗಿ ಸಂಪಾದನೆಯನ್ನು ಹೊಂದಿರುವ ತಾಲೂಕು ಮಟ್ಟದ ವರದಿಗಾರರಿಗೆ ಗೌರವಯುತವಾದ ಪಿಂಚಣಿಯನ್ನು ಕೊಡಬೇಕಾಗಿದೆ. ಸ್ವಂತ ಮನೆ, ಜಾಗವಿಲ್ಲದ ವರದಿಗಾರರಿಗೆ ಅವರ ಕಾರ್ಯಕ್ಷೇತ್ರದಲ್ಲಿ ಜಾಗ ನೀಡಿ ಸ್ವಂತ ಮನೆ ನಿರ್ಮಿಸಲು ಆರ್ಥಿಕ ಸಹಾಯ ನೀಡಬೇಕಾಗಿದೆ. ವರದಿಗಾರರ ಮಕ್ಕಳ ಶಿಕ್ಷಣ, ಮದುವೆಗೆ ಆರ್ಥಿಕ ನೆರವು ನೀಡಬೇಕಾಗಿದೆ. ಬಸ್, ರೈಲ್ವೆ ಗಳಲ್ಲಿ ಸಂಚಾರಿಸಲು ರಿಯಾಯಿತಿ ಪಾಸ್ ನೀಡಬೇಕಾಗಿದೆ. ಆರೋಗ್ಯ ವಿಮೆ ಹಾಗೂ ವರದಿಗಾರನ ಕುಟುಂಬಸ್ಥರಿಗೆ ಆರೋಗ್ಯ ನಿಧಿಯನ್ನು ಸ್ಥಾಪಿಸಬೇಕಾಗಿದೆ. ದಿನಪತ್ರಿಕೆಗಳು ವರದಿಗಾರರನ್ನು ಚೆನ್ನಾಗಿ ನೋಡಿಕೊಳ್ಳುವಂತಾಗಲೂ ದಿನಪತ್ರಿಕೆಯ ಮುದ್ರಣಕ್ಕೆ ಅಗ್ಗದ ದರದಲ್ಲಿ ಪೇಪರ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ದಿನಪತ್ರಿಕೆಗಳ ಖರ್ಚು ವೆಚ್ಚಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಇನ್ನಾದರೂ ಯೋಚಿಸಿತೆ. ಯೋಚಿಸಬೇಕು.  ಇನ್ನೊಬ್ಬರ ಬದುಕಿಗೆ ಸುಂದರ ಅರ್ಥ ಕೊಡುವ ನಮ್ಮ ಬದುಕಿಗೂ ಸುಭದ್ರವಾದ ಮತ್ತು ಸಂತೃಪ್ತಿಯನ್ನು ದಯಪಾಲಿಸಬೇಕಾಗಿದೆ.

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...