Wednesday, March 25, 2020

ಭವಿಷ್ಯದ ಸುಖಕ್ಕಾಗಿ 21 ದಿನಗಳ ತಪಸ್ಸು ಅತ್ಯಗತ್ಯ
ಬದುಕ್ಬೇಕಾಂದ್ರೆ ಹಿಂಗಿರ್ಲೇಬೇಕು.

ಆತ್ಮೀಯರೇ,

ನಾವು ಇನ್ನಷ್ಟು ವರ್ಷಗಳ ಕಾಲ ಬದುಕ್ಬೇಕಾಂದ್ರೆ 21 ದಿನಗಳ ತಪ್ಪಸ್ಸು ಅಂತ್ಲೆ ಹೇಳಿ ಅಥವಾ ತ್ಯಾಗ ಅಂತ್ಲೆ ಹೇಳಿ, ಅಥವಾ ತಾಳ್ಮೆ ಅಂತ್ಲೆ ಹೇಳಿ. ಏನು ಬೇಕಾದ್ರೂ ಹೇಳಿ, ಒಟ್ಟಿನಲ್ಲಿ ಏಪ್ರಿಲ್ 14 ರವರೆಗೆ ಕಡ್ಡಾಯವಾಗಿ ಮನೆಯಲ್ಲಿರುವುದೆ ಮುಂದಿನ ನಮ್ಮ ಬದುಕಿಗೆ ಉತ್ತಮ. 

ಈಗ ಅದು, ಇದು, ಹಂಗಿದ್ರೆ ಚೆನ್ನ, ಹಿಂಗಿದ್ರೆ ಚೆನ್ನ. ಸರಕಾರ ಅದು ಮಾಡಿದ್ರೆ ಉತ್ತಮ, ಇದು ಮಾಡಿದ್ರೆ ಉತ್ತಮ ಎಂದು ಪುಂಗಿ ಊದುವ ಸಮಯವಲ್ಲ. ನೋಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಿಂಗಳಾನುಗಟ್ಟಲೆ ಉಪವಾಸ ಕೂತ್ಕೊಂಡಂತಹ ಶ್ರೇಷ್ಟ ಉದಾಹರಣೆ ನಮ್ಮಲ್ಲಿದೆ. ಎಂಥಹ ತ್ಯಾಗಕ್ಕೂ ಸಿದ್ದರಾಗುವ ನಾವು ಅದು ಇದು ಎನ್ನದೇ 21 ದಿನಗಳವರೆಗೆ ಮನೆಯೊಳಗಡೆನೆ ತೆಪ್ಪಗೆ ಇರುವುದು ಯೋಗ್ಯರ ಲಕ್ಷಣ ಎನ್ನುವುದಕ್ಕಿಂತಲೂ ಅಂಥವರು ಆಯುಷ್ಯ ಇರುವರೆಗೂ ಗಟ್ಟಿಯಾಗಿರುತ್ತಾರೆ. ಹಟ ಬಿಡದವ ಚಟ್ಟ ಏರುವುದರಲ್ಲಿ ಯಾವ ಸಂದೇಹನೂ ಇಲ್ಲ.

ಇದು ನಮ್ಮ ನಿಮ್ಮೆಲ್ಲರ ಬದುಕಿನ ಪ್ರಶ್ನೆ ಕಣ್ರೀ. ಮಾರ್ಕೆಟ್ ಓಪನ್ ಇದೆ, ಅಲ್ಲಿ ಕಿರಾಣಿ ಅಂಗಡಿ ತೆರೆದಿದೆ ಎಂದು ಆಗಾಗ ಹೊರಗಡೆ ಹೋಗಿ ಬರುವಂತಹ ರೂಢಿಯನ್ನು ಮಾಡುವುದೇ ಬೇಡ. ಮನೆಯಲ್ಲಿ ಏನಿದೆ, ಅದನ್ನೆ ತಿಂದು ಬಿದ್ಕೊಂಡಿರುವ. ಮನೆಯಲ್ಲೆ ಇರುವುದರಿಂದ ಮೈ ತುಂಬ ಕೆಲಸನೂ ಕಡಿಮೆ. ಹಾಗಿರುವಾಗ ಹೊಟ್ಟೆ ತುಂಬ ಊಟ ಮಾಡಬೇಕೆಂದಿಲ್ಲ. ಬೇಕಾದಷ್ಟು ಮಟ್ಟಿಗೆ ಊಟ-ತಿಂಡಿ ಹಿತಮಿತವಾಗಿ ಮಾಡುವುದೇ ಒಳಿತು.

ಟೊಮೆಟಾ ಇಲ್ಲದಿದ್ರೂ ಅಡುಗೆ ಮಾಡಬಹುದು. ಮೀನು ಇಲ್ಲದಿದ್ದರೂ ವೆಜ್ ತಿಂದು ಬದ್ಕಬಹುದು. ಅದೇಷ್ಟೊ ಜನರು ತನ್ನ ಜೀವನಾಯುಷ್ಯವಿಡಿ ಬರೀ ಬೆಳೆ ಸಾರಲ್ಲಿ ಊಟ ಮಾಡಿ ಬದುಕು ನಡೆಸ್ತಾರೆ. ಅಂತಹದ್ದರಲ್ಲಿ ಕೇವಲ 21 ದಿನ ಇದ್ದದ್ದನ್ನು ತಿಂದು ಇರ್ಲಿಕ್ಕೇನು ದಾಡಿ ಅಲ್ಲವೆ.

ಡೇಂಜರ್ ಸಿಚ್ವೇಶನ್ ನಲ್ಲಿ ನಾವಿದ್ದೇವೆ. ಇದರ ಗಂಭೀರತೆಯ ಅರಿವು ನಮಗೆಲ್ಲರಿಗೂ ಬೇಕಾಗಿದೆ. ನಮ್ಮ ಆಯುಷ್ಯಕ್ಕಾಗಿ ಪೊಲೀಸರು, ವೈದ್ಯರುಗಳು, ಆರೋಗ್ಯ ಸಿಬ್ಬಂದಿಗಳು, ತಾಲೂಕಾಡಳಿತ ಅಧಿಕಾರಿಗಳು, ಜಿಲ್ಲಾಡಳಿತ ಅಧಿಕಾರಿಗಳು ಟೊಂಕಕಟ್ಟಿ ಅವರ ಜೀವದ ಹಂಗು ತೊರೆದು ಶ್ರಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವರಿಗೂ ಹೆಂಡತಿ-ಮಕ್ಕಳು, ಸಂಸಾರವಿಲ್ಲವೆ? ಎನ್ನುವುದನ್ನು ನಾವ್ಯಾಕೆ ಅರ್ಥ ಮಾಡಿಕೊಳ್ಳಲ್ಲ.

ದಯವಿಟ್ಟು ಡೊಂಟ್ ಕೇರ್ ಮಾಡದರಿ. ಈಗಂತೂ ಬಹುತೇಕರಿಗೆ ಪಡಿತರ ಉಚಿತ ಅಕ್ಕಿ ಸಿಗುತ್ತದೆ. ಬೇಜಾರಾದಾಗ ಒಂದು ದಿನ ಅನ್ನ ಮಾಡಿ, ಮತ್ತೊಂದು ದಿನ ಚಿತ್ರಾನ್ನ, ಒಗ್ಗರನೆ ಅನ್ನ, ಮಸಾಲೆ ಅನ್ನ ಮಾಡ್ಕೊಂಡು ತಿನ್ನಬಹುದು. ಒಟ್ಟಿನಲ್ಲಿ ಇದ್ದದ್ದನ್ನು ತಿಂದು ಬದುಕುವ. ಸಾಧ್ಯವಾದಷ್ಟು ಬೇಗನೆ ಬಾಂಬೆರವಾ, ಚಪಾತಿ ಹಿಟ್ಟು, ಅವಲಕ್ಕಿ, ವಿವಿಧ ಬೇಳೆ-ಕಾಳುಗಳು, ಟೊಮೆಟಾ, ಉಳ್ಳಗಡ್ಡಿ, ಆಲೂಗಡ್ಡೆ ತಂದಿಟ್ಟುಕೊಳ್ಳಿ. ಎಲ್ಲರ ಮನೆಯಲ್ಲಿ ಹಾಲಿನ ಪುಡಿ ತಂದಿಟ್ಟುಕೊಳ್ಳಿರಿ. ಇನ್ನೂ ತಲೆನೋವು, ನೋವು, ಬಿಪಿ ಶುಗರ್ ಹೀಗೆ ಮೊದಲಾದವುಗಳಿಗೆ ಬೇಕಾದ ಗುಳಿಗೆಗಳನ್ನು 1 ತಿಂಗಳು ಬೇಕಾಗುಷ್ಟರ ಮಟ್ಟಿಗೆ ತಂದಿಟ್ಟುಕೊಳ್ಳುವುದು ಉತ್ತಮವಾದರೂ ಮುಂದೆ ಬದುಕಬೇಕಾಂದ್ರೆ ತಂದಿಟ್ಟುಕೊಳ್ಳಲೆಬೇಕು. ಇದೆಲ್ಲಾ ಆದ್ಮೇಲೆ ಕಿರಾಣಿ ಅಂಗಡಿ ತೆರೆದಿಟ್ಟರೂ ಗ್ರಾಹಕರಿಲ್ಲದೇ ಅವರೆ ಅಂಗಡಿ ಬಂದ್ ಮಾಡುವಂತಾಗಬೇಕು.

ಅವರಿವರ ಸಲುವಾಗಿ ಎನ್ನುವುದಕ್ಕಿಂತ ಇನ್ನೊಬ್ಬರ ತಪ್ಪಿನಿಂದ ನಾವು ಸಾಯಬಾರದು. ಬಂಧುಗಳೇ, ನಮ್ಮ ಅಕ್ಕ-ಪಕ್ಕದ ಮನೆಗೆ ಕಳೆದ 1 ತಿಂಗಳಿನಿಂದ ಈಚೆಗೆ ವಿದೇಶದಿಂದ ಬಂದವರಿದ್ರೆ ಮುಲಾಜಿ ಇಲ್ಲದೇ ತಾಲೂಕಾಡಳಿತ, ಬೀಟ್ ಪೊಲೀಸ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದಯವಿಟ್ಟು ಮಾಹಿತಿ ನೀಡಿ. ಇನ್ನೊಬ್ಬ ಮಾಡುವ ತಪ್ಪಿಗೆ ನಾನ್ಯಾಕೆ, ನಾವ್ಯಾಕೆ ಸಾಯಬೇಕೆಂಬುವುದನ್ನು ಈಗಲೆ ಮನದಟ್ಟು ಮಾಡಿಕೊಳ್ಳಿ. ನೋಡಿ ವಿದೇಶದಿಂದ ಬಂದಿದ್ದಾನೆ ಎಂದರೆ ಅವನಿಗೆ ಸೋಂಕು ಇದೆ ಎಂಬುವುದು ಅರ್ಥವಲ್ಲ. ಆದರೆ ತಪಾಸಣೆ ಅತ್ಯಗತ್ಯ ಎನ್ನುವುದನ್ನು ಮನವರಿಕೆ ಮಾಡಬೇಕಾಗಿದೆ. 

ದಯವಿಟ್ಟು ಕೊರೊನಾ ಸೋಂಕಿನ ಗಂಭೀರತೆಯನ್ನು ಅರಿಯಿರಿ. ಏಪ್ರಿಲ್ 21 ರವರೆಗೆ ಮನೆಯಲ್ಲೆ ಇದ್ದಕೊಂಡು ಸಾವಿನ ಕದ ಬಡಿಯುವ ಬದಲು ಕೊರೊನಾವನ್ನು ಹಿಮ್ಮೆಟ್ಟಿಸಿ ಜಯಭೇರಿ ಬಾರಿಸೋಣ. ಜೀವ ಇದ್ರೆ ಮುಂದೆ ಸಾಧಿಸಬಹುದು. ಜೀವನೇ ಇಲ್ಲದಿದ್ರೆ ಮುಂದೇನು? ಎಂಬ ಚಿಂತೆ ಮಾಡುವ ಬದಲು ಮನೆಯಲ್ಲೆ ಇದ್ದುಕೊಂಡು ಮಹಾಮಾರಿಯನ್ನು ಹೊಡೆದೂರುಳಿಸೋಣ.

ಕೊರೊನಾದಿಂದ ಸಾಯಲಾರೆ, ಕೊರೊನವನ್ನು ಒದ್ದೊಡಿಸುವೆ ಎಂಬ ಕೆಚ್ಚೆದೆ ನಮ್ಮೆಲ್ಲರಲ್ಲಿ ಬರಲೆನ್ನುವುದೆ ನನ್ನಯ ಪ್ರಾರ್ಥನೆ.

ನಿಮ್ಮವ
ಸಂದೇಶ್.ಎಸ್.ಜೈನ್




 

Tuesday, March 24, 2020

ಹೀಗೆ ಮಾಡಿದ್ರೆ ಚೆನ್ನ
ಪೊಲೀಸ್, ಆರೋಗ್ಯ ಸಿಬ್ಬಂದಿ/ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್ನಿಂದ ಉಚಿತ ಊಟೋಪಚಾರ ದೊರೆಯಲಿ

ದಾಂಡೇಲಿ: ಕರ್ನಾಟಕ ಲಾಕ್ ಡೌನ್ ನಿಮಿತ್ತ ಸುಡು ಬಿಸಿಲಲ್ಲಿ ಪೊಲೀಸರು ಹಾಗೂ ಕೊರೊನಾ ಸೋಂಕಿನ ವಿರುದ್ದ ಜೀವದ ಹಂಗುತೊರೆದು ಹೋರಾಡುತ್ತಿರುವ ಆರೋಗ್ಯ ಸೈನಿಕರ ಆರೋಗ್ಯ ಕಾಯುವುದು ಸರಕಾರದ ಹಾಗೂ ಸಾರ್ವಜನಿಕರ ಪ್ರಮುಖ ಜವಾಬ್ದಾರಿಯಾಗಿದೆ.

ಇಡೀ ಸಮಾಜದ ಆರೋಗ್ಯಕ್ಕಾಗಿ ರಾತ್ರಿ ಹಗಲೆನ್ನದೇ ಕಾಲಿಗೆ ಚಕ್ರ ಕಟ್ಟಿದಂತೆ ತನ್ನನ್ನು ತಾನು ಸಮರ್ಪಣಾಭಾವದಿಂದ ಸಮರ್ಪಿಸಿಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಹಾಗೂ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರುಗಳಿಗೆ, ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ಸರಿಯಾಗಿ ಸ್ಥಳೀಯಾಡಳಿತದ ವಾಹನಗಳ ಮೂಲಕ ಇಂದಿರಾ ಕ್ಯಾಂಟಿನ್ಗಳಿಂದ ಉಚಿತ ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಅತ್ಯಂತ ಜವಾಬ್ದಾರಿಯುತ ಕಾರ್ಯವನ್ನು ರಾಜ್ಯ ಸರಕಾರ ಈಗಿಂದಿಗಲೆ ಮಾಡಬೇಕಾಗಿದೆ.

ನಮ್ಮ ಬಗ್ಗೆ, ಸಮಾಜದ ಬಗ್ಗೆ ಜೀವಭಯವಿಲ್ಲದೇ ಸೇವೆ ಸಲ್ಲಿಸುವ ಇಂಥವರ ಬಗ್ಗೆ ಸರಕಾರದ ಜೊತೆ ಸಮಾಜವು ಕಾಳಜಿಯನ್ನು ವಹಿಸಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸರಕಾರದ ಗಮನ ಸೆಳೆಯುವ ಕಾರ್ಯ ಮಾಡಬೇಕಾಗಿದೆ ಎಂಬ ಅಂಭೋಣ ಈ ಬರಹದ್ದಾಗಿದೆ. 
 
ಏನಾಂತೀರಿ,
 
ನಿಮ್ಮವ
ಸಂದೇಶ್.ಎಸ್.ಜೈನ್
 

Wednesday, March 18, 2020

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.
ಭಯಬೇಡ-ಆಲಸ್ಯ ಸಲ್ಲದು
ಆತ್ಮೀಯರೇ,
ಜಗತ್ತನ್ನೆ ತಲ್ಲಣಗೊಳಿಸಿದ ಕೊರೊನಾ ಕರುನಾಡ ನೆಲಕ್ಕೂ ವಕ್ಕರಿಸಿರುವುದು ಬೇಸರದ ಸಂಗತಿ. ಹಾಗಾಂತ ಹೇಳಿ ಭಯಪಡುವ ಅಗತ್ಯವಂತು ಇಲ್ಲವೆ ಇಲ್ಲ. ಆದರೆ ಆಲಸ್ಯ ಸಲ್ಲದು ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ. ನಮ್ಮ ದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಬಹುತೇಕ ಜನರು ಗುಣಮುಖರಾಗುತ್ತಿರುವುದು ಸಂತಸದ ಸಂಗತಿ.


ಬಂಧುಗಳೆ, ಭಯ ಪಡುವ ಅಗತ್ಯವಿಲ್ಲವೆಂದು ತಿಳಿದು ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾತ್ರ ಬೇಡವೆ ಬೇಡ. ಆರೋಗ್ಯ ಇಲಾಖೆ ತಿಳಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.


ನಾವೇನು ಮಾಡಬೇಕು?
  •     ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು.

  •     ಪರಿಚಯಸ್ಥರು, ನಮ್ಮವರು ಸಿಕ್ಕಾಗ ಹಸ್ತಲಾಘವ ಮಾಡುವ ಬದಲು ನಮಸ್ಕರಿಸುವುದೆ ಉತ್ತಮ.

  •     ಮಾಸ್ಕ್ ಧರಿಸಿಕೊಳ್ಳುವುದು ಉತ್ತಮ.

  •     ಘಂಟೆಗೊಮ್ಮೆ ಕೈ, ಮುಖ ಸೋಪ್/ಡೆಟಲ್ ಮುಂತಾದವುಗಳಲ್ಲಿ ತೊಳೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು.

  •     ನಮ್ಮೂರಿಗೆ ಅಥವಾ ನಮ್ಮ ಅಕ್ಕದ ಮನೆಗೆ ಹೊರ ರಾಜ್ಯದಿಂದ, ವಿದೇಶದಿಂದ ಯಾರಾದರೂ ಬಂದಲ್ಲಿ ಅವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಹಾಗಾಂತ ಹೇಳಿ ಇದು ಅವರ ಬಗ್ಗೆ ಮಾಡುವ ದೂರು ದಾಖಲು ಅಲ್ವೆ ಅಲ್ಲ. ಜೆಸ್ಟ್ ನಮ್ಮೂರ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ.

  •     ಯಾರಾದರೂ ಕೆಮ್ಮು, ನೆಗಡಿಯಿಂದ ಬಳಲುತ್ತಿರುವುದು ಗೊತ್ತಾದ್ದಲ್ಲಿ ತಕ್ಷಣವೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.

  •     ಅಕ್ಕ ಪಕ್ಕದ ಮನೆಯವರತ್ರ, ನಾವು ನಮ್ಮ ಗೆಳೆಯರತ್ರ ಊರ ಉಸಾಬರಿ ಮಾತನಾಡುವಾಗ ಸ್ವಲ್ಪ ಕೊರೊನಾ ಮುನ್ನೆಚ್ಚರಿಕೆಯ ಬಗ್ಗೆ ಮಾತನಾಡಿಕೊಂಡು ಜನಜಾಗೃತಿ ಮೂಡಿಸುವುದು ಉತ್ತಮವಾದ ಬೆಳವಣಿಗೆ.

  •     ನಮ್ಮೂರಿನಿಂದ ಅಥವಾ ನಮ್ಮ ಅಕ್ಕಪಕ್ಕದ ಮನೆಯಿಂದ ಯಾರಾದರೂ ಹೊರ ದೇಶ, ಹೊರ ರಾಜ್ಯಗಳಿಗೆ ಹೋದ ಸಮಯದಲ್ಲೂ ಮತ್ತು ಅವರು ಅಲ್ಲಿಂದ ಬಂದ ನಂತರವು ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.

  •     ಮನೆ ಸುತ್ತಮುತ್ತ ತ್ಯಾಜ್ಯ ಎಸೆಯುವುದನ್ನು ಮಾಡಲೆಬೇಡಿ. ತ್ಯಾಜ್ಯ ನೀರು ಎಲ್ಲಿಯೂ ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಿ.

  •     ಪ್ರತಿಯೊಬ್ಬರು ಹೆಚ್ಚಾನು ಹೆಚ್ಚು ಅಡಿಗೆಗೆ ತೆಂಗಿನ ಕಾಯಿ ಬಳಸುತ್ತಾರೆ. ಹಾಗಾಗಿ ಸಂಜೆಯಾಗುತ್ತಲೆ ಮನೆ ಮುಂದೆ ತೆಂಗಿನ ಕಾಯಿಯ ಚಿಪ್ಪಿ ಹಾಗೂ ಅದರ ಹೆಪ್ಪನ್ನು ಒಂದು ಡಬ್ಬದಲ್ಲಿ ಹಾಕಿ ಬೆಂಕಿ ಕೊಟ್ಟಾಗ ಹೊಗೆ ಬರುತ್ತದೆ. ಆ ಹೊಗೆಯಿಂದ ಸೊಳ್ಳೆ
    ಯಿ0ರಕ್ಷಿಸಬಹುದಾಗಿದೆ.

  •     ಇನ್ನು ಬಹುತೇಕ ಟ್ರಕ್ ಚಾಲಕರು ದಾಂಡೇಲಿಯಿಂದ ಹೊರ ರಾಜ್ಯಗಳಿಗೆ ಹೋಗುತ್ತಾರೆ. ಅವರೆಲ್ಲರೂ ನಮ್ಮ ಅಣ್ಣ ತಮ್ಮಂದಿರರು ಎನ್ನುವುದನ್ನು ಯಾರು ಮರೆಯುವಂತಿಲ್ಲ. ಅವರಿಗೆ ವಿಶೇಷವಾದ ಮುನ್ನೆಚ್ಚರಿಕೆಯ ಅರಿವನ್ನು ಮೂಡಿಸಿ.
        ಇನ್ನೂ ಕೊರೊನಾ ಸೋಂಕಿನ ಬಗ್ಗೆ ಊಹಾಪೋಹದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಊರಿನಲ್ಲಿ, ಜನರಲ್ಲಿ ಭಯದ ವಾತವರಣ ಸೃಷ್ಟಿ ಮಾಡದಿರಿ.

  •     ಈಗಿನ ಪರಿಸ್ಥಿತಿ ನೋಡಿದಾಗ ಮತ್ತು ಈ ಸೊಂಕನ್ನು ಸಂಪೂರ್ಣ ತಡೆಗಟ್ಟಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಹಾಗಾಗಿ ಒಂದು ತಿಂಗಳಿಗೆ ಬೇಕಾಗುವಷ್ಟರ ಮಟ್ಟಿಗೆ ಪಡಿತರ, ಆಹಾರ ಸಾಮಾಗ್ರಿಗಳನ್ನು ಖರೀದಿಸಿಟ್ಟುಕೊಳ್ಳುವುದು ಉತ್ತಮ. ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಿದ್ದಲ್ಲಿ ಇದು ನಮಗೆ ಆರ್ಥಿಕವಾಗಿಯೂ ಮತ್ತು ಆರೋಗ್ಯದಾಯಕವಗಿಯೂ ಅನುಕೂಲವಾಗಲಿದೆ.

  •     ಹಾಲನ್ನು ನಂಬಿಕೊಳ್ಳಬೇಕು. ಆದರೆ ಇಂತಹ ಸ್ಥಿತಿಯಲ್ಲಿ ಮನೆಯಲ್ಲಿ ಎಟ್ ಲಿಸ್ಟ್ ಅರ್ಧ ಕೆಜಿಯಾದರೂ ಹಾಲಿನ ಪುಡಿಯನ್ನು ಶೇಖರಿಸಿಟ್ಟುಕೊಳ್ಳುವುದು ಉತ್ತಮ.

  •     ಇನ್ನೂ ತರಕಾರಿ, ಮಾಂಸ ಸಿಗದೇ ಹೋದಲ್ಲಿ ಅಥವಾ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೂ ತೊಂದರೆಯಾಗದಂತೆ ನಾವು ನಮ್ಮ ಮನೆಗಳಲ್ಲಿ ಕನಿಷ್ಟ 15 ದಿನಕ್ಕಾಗುವಷ್ಟು ವಿವಿಧ ಬೆಳೆ-ಕಾಳುಗಳನ್ನು ಸಂಗ್ರಹಿಸಟ್ಟಲ್ಲಿ ಅದನ್ನು ಆಹಾರವನ್ನಾಗಿ ಉಪಯೋಗಿಸಬಹುದಾಗಿದೆ. 15-20 ದಿನ ಇಡಬಲ್ಲ ತರಕಾರಿ, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಸಂಗ್ರಹಿಸಿಡುವುದು ಉತ್ತಮ.

  •     ಸರದಿ, ಜ್ವರ, ತಲೆನೋವು, ಗ್ಯಾಸ್ಟಿಕ್, ಬಿ.ಪಿ/ಶುಗರ್ ಗುಳಿಗೆಗಳನ್ನು 15-20 ದಿನಗಳಿಗೆ ಬೇಕಾಗುವಷ್ಟು ತಂದಿಟ್ಟುಕೊಳ್ಳುವುದು ಉತ್ತಮ.

  •     ಏನೇ ಆಗಲಿ ನಮ್ಮ ನಮ್ಮ ಬೀಟ್ ಪೊಲೀಸ್ ಸಿಬ್ಬಂದಿಯ ಮೊಬೈಲ್ ಸಂಖ್ಯೆ, ಪೊಲೀಸ್ ಠಾಣೆಯ ದೂರವಾಣಿ, ನಗರ ಸಭೆ ಹಾಗೂ ತಹಶೀಲ್ದಾರ್ ಕಾರ್ಯಾಲಯದ ದೂರವಾಣಿ, ನಮ್ಮ ನಮ್ಮ ಏರಿಯದ ಆಶಾ ಕಾರ್ಯಕರ್ತೆಯ ಮೊಬೈಲ್ ಸಂಖ್ಯೆಗಳು ಪ್ರತಿಯೊಂದು ಮನೆಯಲ್ಲಿ ಆ ಮನೆಯ ಎಲ್ಲರಿಗೂ ಕಾಣುವಂತೆ ಬರೆದಿಟ್ಟುಕೊಳ್ಳಿ.

  •     ನಮ್ಮ ಅಕ್ಕಪಕ್ಕದಲ್ಲಿ ಸಾಮಾಜಿಕ ಜ್ಞಾನವೆ ಇಲ್ಲದ ಹಾಗೂ ಅನಕ್ಷರಸ್ಥರಾಗಿದ್ದಲ್ಲಿ ದಯವಿಟ್ಟು ಅವರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ, ಜಾಗೃತಿಯನ್ನು ಮೂಡಿಸಿ. ಇಲ್ಲವಾದಲ್ಲಿ ನಾವೆಷ್ಟು ಮುಂಜಾಗೃತೆ ತೆಗೆದುಕೊಂಡರೂ ನಮ್ಮ ಅಕ್ಕಪಕ್ಕದವರಿಗೆ ಸೋಂಕು ತಗಲಿದರೇ ನಮಗೆ ತಗಲದಿರಬಾರದೇಕೆ ಅಲ್ವೆ.

ಕೊರೊನಾ ಸೋಂಕಿತರ ಬಗ್ಗೆ ಅಥವಾ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನ ಮೂಡಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದನ್ನು ಯಾರು ಮರೆಯಬೇಡಿ. ಇದು ನಾವು ನೀಡುತ್ತಿರುವ ದೂರು ಅಲ್ಲ. ಇದು ನಾವು ನೀಡುತ್ತಿರುವುದು ಜೆಸ್ಟ್ ಮಾಹಿತಿಯಷ್ಟೆ. ಮಾಹಿತಿ ನೀಡಿದವರ ಹೆಸರನ್ನು ಎಲ್ಲಿಯೂ ಸಂಬಂಧಿಸಿದ ಇಲಾಖೆ ಬಹಿರಂಗ ಪಡಿಸುವುದಿಲ್ಲ. ಈ ವಿಚಾರದಲ್ಲಿ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎನ್ನುವುದನ್ನು ಎಲ್ಲರು ಅರಿತುಕೊಳ್ಳಿ.

ಆರೋಗ್ಯವೆ ಭಾಗ್ಯ.

ನಿಮ್ಮವ
ಸಂದೇಶ್.ಎಸ್.ಜೈನ್




ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...