Saturday, April 25, 2020

ಇಂದು ನನ್ನ 8 ನೇ ವರ್ಷದ ವಿವಾಹ ವಾರ್ಷಿಕೋತ್ಸವ
ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ವರ್ಷಗಳು ಸಂದಿವೆ. ಕಳೆದ 8 ವರ್ಷಗಳಿಂದಲೂ ನನ್ನನ್ನು ಪ್ರತಿಸಲ ಪ್ರತಿಕ್ಷಣ ಸಹಿಸಿಕೊಂಡು ಉದ್ದರಿಸಿ ಮುನ್ನಡೆಸುತ್ತಿರುವ ನನ್ನ ಜೀವನದ ಭಾಗ್ಯದ ಬೆಳಕಾದ ಕೈ ಹಿಡಿದ ಮಡದಿ ಪದ್ಮಶ್ರೀಗೆ ನಮ್ರ ಕೃತಜ್ಞತೆಗಳು. ನನ್ನ ಅಪ್ಪ, ಅಮ್ಮನಿಗೆ ಹ್ಮೆಮಯ ಸೊಸೆಯಾಗಿ, ಅತ್ತೆ ಮಾವನಿಗೆ ಪ್ರೀತಿಯ ಮಗಳಾಗಿ, ನನ್ನ ಹೃದಯವಾದ ಮಗ ಸುಯೋಗನಿಗೆ ಅಕ್ಕರೆಯ ಅಮ್ಮನಾಗಿ, ನನ್ನ ಸಂಸಾರದೊಡತಿಯಾಗಿರುವ ಪದ್ಮಶ್ರೀ ನಿನಗಿದೊ ಮಗದೊಮ್ಮೆ ಥ್ಯಾಂಕ್ಸ್. ನನ್ನನ್ನು ವರಿಸಿ, ನನ್ನನ್ನು ಸಹಿಸಿ ಸಲಹುತ್ತಿರುವ ಪದ್ಮಶ್ರೀ ನಿನ್ನ ಪ್ರಾಂಜಲ ಹೃದಯದ ಮನಸ್ಸಿಗೆ ನಾನು ಏನು ಹೇಳಿದರೂ ಕಡಿಮೆನೆ. ನನ್ನ ಸಾವಿರ ತಪ್ಪುಗಳನ್ನು ಮನ್ನಿಸಿ, ಮುನ್ನಡೆಸುವ ನಿನಗೆ ಇಂದು ನನ್ನಿಂದಾಗಿರುವ ತಪ್ಪುಗಳಿಗೆ ಸ್ವಾರಿ ಹೇಳುತ್ತೇನೆ.

ಐ ಲೈವ್ ಯೂ, ಪದ್ಮಶ್ರೀ, ಐ ಲವ್ ಯೂ

ಎಂದೆಂದೂ ನಿನ್ನವನೆ,
ಸಂದೇಶ್.ಎಸ್.ಜೈನ್

Thursday, April 23, 2020

 ಜೀವನದಲ್ಲಿ ಬ್ರೇಕ್ ಡೌನ್ ಎದುರಿಸುತ್ತಿರುವ ಬ್ರೇಕಿಂಗ್ ಸುದ್ದಿ ಕೊಡುವ ತಾಲೂಕು ಮಟ್ಟದ ವರದಿಗಾರರು

ಅಭದ್ರತೆಯಲ್ಲಿರುವ ವರದಿಗಾರರುಗಳಿಗೆ ಸರಕಾರದಿಂದ ಜೀವನ ಭದ್ರತೆ ಸಿಗಬಹುದೆ?

ಬರಹ: ಸಂದೇಶ್.ಎಸ್.ಜೈನ್, ದಾಂಡೇಲಿ
ವರದಿಗಾರರು,
ವಿಜಯನಗರ, ದಾಂಡೇಲಿ-581325
ಉತ್ತರಕನ್ನಡ ಜಿಲ್ಲೆ, ಕರ್ನಾಟಕ.
ಮೊ:9620595555, 7349443043
Email: sandesh.kanyady55@gmail.com
blog: sandeshnewspage.blogspot.com

ದಾಂಡೇಲಿ : ಅವನ ಮನೆಯಲ್ಲಿ ಹೆಂಡತಿ ಅಥವಾ ಅಮ್ಮ ಅನಾರೋಗ್ಯಗೊಂಡಿದ್ದರೂ, ಆರ್ಥಿಕ ಆಡಚಣೆಯಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಯಾತನೆಯ ಸ್ಥಿತಿ. ಅದೇ ಸಂದರ್ಭದಲ್ಲಿ ಇಲ್ಲೊಬ್ಬ ಬಡವ ಕ್ಯಾನ್ಸರ್ ಪೀಡಿತನಾಗಿದ್ದು, ಅವನು ಬದುಕುಳಿಯಬೇಕಾದರೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು ಹಣದ ತೊಂದರೆಯಿದೆ,  ದಯವಿಟ್ಟು ದಾನಿಗಳ ನೆರವಿಗಾಗಿ ಸುದ್ದಿ ಮಾಡುವಿರ ಎಂದು ಮೊಬೈಲ್ ಕರೆ ಬಂದು ಮಾತಾಡಿಟ್ಟ ತಕ್ಷಣವೆ  ಬೈಕನ್ನೇರಿ ಅನಾರೋಗ್ಯ ಪೀಡಿತನಲ್ಲಿಗೆ ಭೇಟಿ ಕೊಟ್ಟು, ಅವನ ಮಾಹಿತಿ ಪಡೆದು ಶಸ್ತ್ರಚಿಕಿತ್ಸೆಗೆ ಸಹಾಯವನ್ನು ಯಾಚಿಸುವ ವರದಿ ಮಾಡಿ ಆತ ಬದುಕುವಂತಾಗಲೂ ಒದ್ದಾಡುವ ತಾಲೂಕು ಮಟ್ಟದ ವರದಿಗಾರರು ಬಿದ್ದಾಗ ಅವರನ್ನು ಎಬ್ಬಿಸುವವರು ಯಾರು? ಎಂಬ ಪ್ರಶ್ನೆ ಎಲ್ಲ ತಾಲೂಕು ಮಟ್ಟದ ಪತ್ರಕರ್ತರದ್ದಾಗಿದೆ.

ಹೌದು ಸ್ನೇಹಿತರೇ, ಮಹಾಮಾರಿ ಕೊರೊನಾದಿಂದ ಭಾರತ ಲಾಕ್ ಡೌನ್ ಆಗಿದೆ. ಆದರೆ ತಾಲೂಕು ಮಟ್ಟದ ವರದಿಗಾರರ ಜೀವನ ಮಾತ್ರ ಸದಾ ಬ್ರೇಕ್ ಡೌನ್ ನಲ್ಲಿರುವುದು ದುರ್ದೈವ್ಯ. ಈಗ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳು, ಜನಪ್ರತಿನಿಧಿಗಳು ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಆಹಾರ ವಸ್ತುಗಳನ್ನು ದಾನ ಮಾಡುತ್ತಾರೆ. ಸುದ್ದಿಗಾಗಿ ನಾವು ಹೋಗುತ್ತೇವೆ. ಪೋಟೊ ಕ್ಲಿಕ್ಕಿಸಿ ಬಂದು ಸುದ್ದಿ ಮಾಡುತ್ತೇವೆ. ಯಾವ ಬಡವರಿಗೆ ಅಕ್ಕಿ, ಬೆಳೆ ಕೊಡಲಾಗುವ ಸುದ್ದಿ ಮಾಡುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರ ಮನೆಯಲ್ಲಿ ಬೆಳೆ-ಕಾಳುಗಳ ಡಬ್ಬ ಖಾಲಿಯಾಗಿದ್ದು ಗೊತ್ತಿದ್ದರೂ ಮಾನ ಮರ್ಯಾದಿಗಂಜಿ ಆ ದಾನಿಗಳ ಬಳಿ ಕೈ ಚಾಚುವುದಿಲ್ಲ. ಇತ್ತ ದಾನಿಗೂ ವರದಿಗಾರರಿಗೆ ಕೊಡಲು ಸರಿಯಾಗುತ್ತೆಯೇ ಎಂಬ ಸಂಕೋಚ. ಈ ಸಂಕೋಚಗಳ ಮಧ್ಯೆ ದಿನ ನಿತ್ಯ ಇನ್ನೊಬ್ಬರ ಬದುಕಿಗೆ ಆಸರೆಯಾಗುವ ವರದಿಗಾರನಿಗೆ ಮಾನಸಿಕ ಬೇಸರವೆ ಬಹುದೊಡ್ಡ ಆಸ್ತಿ.

ತಾಲೂಕು ಮಟ್ಟದ ವರದಿಗಾರರಾದ ನಾವೆ ಅಲ್ಲಿ ಬಡವರು ಇದ್ದಾರೆ, ಇಲ್ಲಿ ಸಂಕಷ್ಟದಲ್ಲಿದ್ದಾರೆ ಎಂದು ಅವರಿವರಿಗೆ ಅವರಿವರು ದಾನಿಗಳಿಂದ ದಾನ ಮಾಡಿಸುವ ಸೇತುವೆಗಳಾಗುತ್ತೇವೆ. ನಾವು ಇನ್ನೊಬ್ಬರ ಬದುಕಿಗೆ ಸಹಾಯದ ಸೇತುವೆಯಾಗುತ್ತೇವೆ. ಆದರೆ ನಮ್ಮ ಮನೆಯ ಸಂಕಷ್ಟಕ್ಕೆ ಸೇತುವೆಯಾಗುವವರು ಯಾರು ಎಂಬ ಪ್ರಶ್ನೆ ಸಹಜವಾಗಿಯೆ ಕಾಡುತ್ತಿದೆ. ಸಮಾಜದಲ್ಲಿ ಗೌರವಯುತವಾದ ಸ್ಥಾನವಿರುವುದರಿಂದ ಅತ್ತ ಆ ವರದಿಗಾರನಿಗೆ ದಾನಿಗಳ ಬಳಿ ಕೈ ಚಾಚಲು ಆಗದು, ಇತ್ತ ಕೊಡುವ ದಾನಿಗೂ ಹೇಗೆ ಕೊಡಲಿ ಎಂಬ ಚಿಂತೆ ಮತ್ತು ಬಡವನಲ್ಲದಿರಬಹುದೆಂಬ ಹಾಗೂ ಕಷ್ಟದಲ್ಲಿರಲಿಕ್ಕಿಲ್ಲ ಎಂಬ ಅಭಿಪ್ರಾಯವಿರುವುದು ಸಹ ಇನ್ನೊಂದೆಡೆ ಎನ್ನುವುದನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲ.

ಸುದ್ದಿಗಾಗಿ ಅಲ್ಲಿ ಇಲ್ಲಿ ಎಂದು ಸಾಕಷ್ಟು ಕಡೆ ಓಡಾಡುತ್ತಿರುತ್ತೇವೆ. ಸುದ್ದಿ ಯಾರ್ದಾದರೂ ನಮ್ಮ ಬೈಕಿಗೆ ಹಾಕುವ ಪೆಟ್ರೋಲ್ ಮಾತ್ರ ನಮ್ಮದೆ ಎನ್ನುವುದು ಸತ್ಯ. ಅದು ಒಂದೊಂದು ಸಲ ಪೆಟ್ರೋಲ್ ಹಾಕಲು ಹಣವಿಲ್ಲದೆ ಕಿಸೆಯಲ್ಲಿ ಕೇವಲ 20 ರೂ ವಿರುವಾಗಲೆ ಪೆಟ್ರೋಲ್ ಖಾಲಿಯಾದರೇ ಪೆಟ್ರೋಲ್ ಪಂಪಿನಲ್ಲಿ ಕನಿಷ್ಟ ಮೊತ್ತದ ಪೆಟ್ರೋಲ್ ಹಾಕಲು ಮುಜುಗರ. ಜನದಟ್ಟನೆ ಖಾಲಿಯಾದ ನಂತರ ಗಡಿಬಿಡಿ ಎಂಬಂತೆ ನಾಟಕವಾಡಿ ಅಂತೂ ಕೊನೆಗೆ 20 ರೂ ಪೆಟ್ರೋಲ್ ಹಾಕೊಂಡು ಹೋಗುವಂತಹ ಸ್ಥಿತಿ ತಾಲೂಕು ಮಟ್ಟದ ವರದಿಗಾರರದ್ದಾಗಿದೆ.
ಬದುಕು ಬರ್ಬದ್-ಆದರೆ ಸುದ್ದಿ ಮಾತ್ರ ಜಬರ್ದಸ್ತ್
ತಾಲೂಕು ಮಟ್ಟದ ವರದಿಗಾರರ ಬದುಕು ಬರ್ಬದಾದರೂ ಸುದ್ದಿ ಮಾತ್ರ ಜಬರ್ದಸ್ತ್ ಎನ್ನುವುದು ಎಲ್ಲರು ಒಪ್ಪಿಕೊಳ್ಳಲೆಬೇಕು. ಒಂದು ಊರಿನ ಅಭಿವೃದ್ಧಿಯಲ್ಲಿ ಆ ಊರಿನ ಪತ್ರಿಕಾ ವರದಿಗಾರರ ಪಾತ್ರ ಬಹಳ ಮುಖ್ಯವಾಗಿದೆ. ಕೇವಲ ಒಂದು ಪೆನ್ನಿನಿಂದ ಅದೇಷ್ಟೋ ಊರಿನ ರಸ್ತೆಗಳು, ಗಟಾರಗಳು, ಶಾಲೆಗಳು ಹೀಗೆ ಸಾರ್ವಜನಿಕ ಕೆಲಸ ಕಾರ್ಯಗಳು ಆಗಿವೆ. ಕೆಲಸ ಮಾಡದ ಜನಪ್ರತಿನಿಧಿಗಳಿಂದ ಇದೇ ವರದಿಗಾರರು ತಮ್ಮ ಹರಿತವಾದ ವರದಿಗಳ ಮೂಲಕ ಕೆಲಸ ಮಾಡಿಸುತ್ತಿರುವುದು ಗೊತ್ತಿರುವ ಸಂಗತಿ. ಇನ್ನೂ ಅವರಿರವರು ಕರೆದಾಗ ಸುದ್ದಿಗೋಷ್ಟಿಗೆ ಹೋಗಿ ಸುಮಾರು ಒಂದೆರೆಡು ಗಂಟೆಗಳವರೆಗೆ ಸುದ್ದಿಗೋಷ್ಟಿಯಲ್ಲಿ ಕುಳಿತು ಅವರು ಹೇಳಿದ್ದನ್ನೆಲ್ಲ ಬರೆದು ಸುದ್ದಿ ಮಾಡುತ್ತೇವೆ. ಆ ಸುದ್ದಿ ಗೋಷ್ಟಿಗೆ ಹೋಗಲು ಪೆಟ್ರೋಲಿಗೆ ಸಾಕಾಗುವಷ್ಟು ಸುದ್ದಿಗೆ ಹಣ ಬರುತ್ತದೆ. ಆದರೆ ನಮ್ಮ ಶ್ರಮದ ಆದಾಯ ಸೊನ್ನೆ ಎನ್ನಲು ಅಡ್ಡಿಯಿಲ್ಲ.

ಇವತ್ತು ರಾಜ್ಯದ ಟಿವಿ ಚಾನೆಲ್ಗಳಲ್ಲಿ ಬ್ರೇಕಿಂಗ್ ಆಗುವ ಬಹುತೇಕ ಸುದ್ದಿಗಳು ನಮ್ಮದೆ. ಆದರೆ ಆ ಸುದ್ದಿ ನಮ್ಮೆದೆಂದು ಹೇಳಲು ಮತ್ತು ಅದಕ್ಕೆ ಸಂಭಾವನೆ ಪಡೆಯಲು ನಮಗೆ ಹಕ್ಕಿಲ್ಲ ಎನ್ನುವುದು ವಾಸ್ತವ ಸತ್ಯ. ಟಿವಿ ನ್ಯೂಸ್ ಚಾನೆಲುಗಳಿಗೆ ಜಿಲ್ಲೆಗೊಬ್ಬರೆ ವರದಿಗಾರರು ಇರುವುದರಿಂದ ಅವರಿಗೆ ಮಿಕ್ಕೆಲ್ಲ ತಾಲೂಕುಗಳ ಸುದ್ದಿ ಮೊಬೈಲುಗಳ ಮೂಲಕ ಮುಟ್ಟಿಸುವವರು ನಮ್ಮಂತಹ ತಾಲೂಕು ವರದಿಗಾರರುಗಳು ಎನ್ನುವುದು ಎಲ್ಲರಿಗೂ ತಿಳಿದಿರಲಿ. ಆದರೆ ಅವರು ಬ್ರೇಕಿಂಗ್ ಕೊಟ್ಟು ಅದರ ಮಹತ್ವ ಕಳೆದುಹೊದ ಮರುದಿನ ನಮ್ಮ ಸುದ್ದಿಗಳು ಬಂದು ಬಿಡ್ತಾವೆ. ಇನ್ನು ಒಂದು ಮಾತು ಹೇಳಬೇಕೆಂದರೇ ಅದೇಷ್ಟೊ ನಮ್ಮ ಸುದ್ದಿಗಳೆ ಅಮಾಯಕರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಕೊಡಿಸುವಲ್ಲಿ ಸಾಕ್ಷಿಯ ರೂಪದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸರಕಾರದ ಗುಪ್ತಚಾರ ಇಲಾಖೆಯು ನೇರವಾಗಿ ಒಪ್ಪಿಕೊಳ್ಳಲಾಗದಿದ್ದರೂ ಅವರು ಸಹ ಹೆಚ್ಚಾನು ಹೆಚ್ಚು ತಾಲೂಕು ಮಟ್ಟದ ವರದಿಗಾರರ ಜೊತೆ ಹೆಚ್ಚಿನ ಓಡನಾಟವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಅಗತ್ಯದ ಮಾಹಿತಿಯನ್ನು ನಮ್ಮಿಂದಲೆ ಪಡೆದುಕೊಳ್ಳುತ್ತಾರೆ.

ಸರಕಾರದ ಯಾವುದೇ ಯೋಜನೆಗಳು ಫಲಪ್ರದಾಯಕವಾಗಲು ತಾಲೂಕು ಮಟ್ಟದ ವರದಿಗಾರರುಗಳ ಪರಿಣಾಮಕಾರಿ ವರದಿಗಳು ಮಹತ್ವಪೂರ್ಣವಾಗಿವೆ. ಹಳ್ಳಿಯಿಂದ ದಿಲ್ಲಿಯವರೆಗೆ ಬದಲಾವಣೆ ತರಬಲ್ಲ ತಾಕತ್ತು ಹೊಂದಿರುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರಿಗೆ ಸಂಸಾರ ನಿರ್ವಹಿಸುವ ತಾಕತ್ತು ಇಲ್ಲದಿರುವುದು ಮಾತ್ರ ದುರಂತ.
ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಎಲ್ಲವೂ ಉಂಟು-ನಮಗೆ ಮಾತ್ರ ಸಂಕಟ ಸದಾ ಉಂಟು
ಸರಕಾರದ ಹಲವಾರು ಯೋಜನೆಗಳು ಕೈ ತುಂಬ ವೇತನ ಪಡೆಯುವ ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ಸೀಮಿತವಾಗುತ್ತಿದೆ. ತಾಲೂಕು ಮಟ್ಟದ ವರದಿಗಾರರು ತನ್ನ ಪಾಡಿಗೆ ತಾನಿದ್ದರೇ ಟಿವಿಯವರು ಬ್ರೇಕಿಂಗ್ ಸುದ್ದಿ ಕೊಡುವುದಾದರು ಹೇಗೆ?. ಕ್ರೈಂ ಸ್ಟೋರಿಗೆ ಸುದ್ದಿಯ ಜಾಡನ್ನು ಹಿಡಿಯಲು ಟಿ.ವಿ ವರದಿಗಾರರಿಗೆ ಆಯಾಯ ತಾಲೂಕಿನ ವರದಿಗಾರರುಗಳ ಸಹಾಯ ಬೇಕೆ ಬೇಕು.  ಸರಕಾರದ ಹಲವಾರು ಯೋಜನೆಗಳು ಕೈ ತುಂಬ ಸಂಬಳ ಪಡೆಯುವ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ದಕ್ಕುತ್ತವೆ. ಅಭದ್ರತೆಯಲ್ಲಿರುವ ನಮಗೆ ಏನು ಸಿಗದೆ ನರಕಯಾತನೆಯ ಬದುಕು ನಮ್ಮದು. ನಮ್ಮನ್ನು ಆಳುವವರಿಗೆ ಆಳುವ ಮುನ್ನ ಆಳುವಂತಾಗಿಸಲು ನಾವೆ ಬೇಕು. ಆದರೆ ಆಳುವ ಸಮಯದಲ್ಲಿ ನಮ್ಮ ನೆನಪು ಇಷ್ಟು ವರ್ಷವಾದರೂ ಬಂದಿಲ್ಲವಲ್ಲ ಯಾಕೆ?. ಅಬ್ಬಬ್ಬಾ ಅಂದ್ರೆ ತಿಂಗಳಿಗೆ ಈಗಲೂ 2 ರಿಂದ 3 ಸಾವಿರ ಸಂಭಾವನೆಯನ್ನಷ್ಟೆ ಪಡೆಯುತ್ತೇವೆ ಎಂಬುವುದು ತಿಳಿದಿರಲಿಕ್ಕಿಲ್ಲವೆ. ಈಗ ತಿಳಿಯಿತ್ತಲ್ಲ, ಓಕೆ ನೋಡೋಣ.
ಸ್ವಸ್ಥ ಸಮಾಜಕ್ಕಾಗಿ ಪಣ ತೊಡುವ ತಾಲೂಕು ವರದಿಗಾರರಿಗೆ ಜೀವನ ಭದ್ರತೆಯ ಅನಿವಾರ್ಯತೆಯಿದೆ:
ಸಮಾಜ ಸ್ವಸ್ಥತೆಗಾಗಿ, ಸಮಾಜದ ಉನ್ನತಿಗಾಗಿ ಸಮಾಜಘಾತುಕರನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಇಂಥಹ ಸಂದರ್ಭಗಳಲ್ಲಿ ಅದೇಷ್ಟೊ ತಾಲೂಕುಮಟ್ಟದ ವರದಿಗಾರರು ಸಾವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಅನೇಕ ವರದಿಗಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ಅಪತ್ತಿಗೆ ಒಳಗಾಗಿ ಸಾವಿಗೀಡಾದ ವರದಿಗಾರನ ಮಡದಿ ತನ್ನ ಮಕ್ಕಳ ಬದುಕಿಗಾಗಿ ಇನ್ನೊಬ್ಬರ ಮನೆಯ ಮುಸುರೆ ತಿಕ್ಕಬೇಕಾದ ಸ್ಥಿತಿ ಬರುವಂತಾಗಿದೆ. ಹೀಗಿರುವಾಗ ಸರಕಾರ ತಾಲೂಕು ಮಟ್ಟದ ವರದಿಗಾರರುಗಳ ಜೀವನ ಭದ್ರತೆಯ ಬಗ್ಗೆ ಸುಯೋಗ್ಯ ಯೋಜನೆಗಳನ್ನು ಅನುಷ್ಟಾನ ಮಾಡಬೇಕಾಗಿದೆ. ಕನಿಷ್ಟ ಕೂಲಿ ಕಾರ್ಮಿಕರಿಗಿಂತಲೂ ಕಡೆಯಾಗಿ ಸಂಪಾದನೆಯನ್ನು ಹೊಂದಿರುವ ತಾಲೂಕು ಮಟ್ಟದ ವರದಿಗಾರರಿಗೆ ಗೌರವಯುತವಾದ ಪಿಂಚಣಿಯನ್ನು ಕೊಡಬೇಕಾಗಿದೆ. ಸ್ವಂತ ಮನೆ, ಜಾಗವಿಲ್ಲದ ವರದಿಗಾರರಿಗೆ ಅವರ ಕಾರ್ಯಕ್ಷೇತ್ರದಲ್ಲಿ ಜಾಗ ನೀಡಿ ಸ್ವಂತ ಮನೆ ನಿರ್ಮಿಸಲು ಆರ್ಥಿಕ ಸಹಾಯ ನೀಡಬೇಕಾಗಿದೆ. ವರದಿಗಾರರ ಮಕ್ಕಳ ಶಿಕ್ಷಣ, ಮದುವೆಗೆ ಆರ್ಥಿಕ ನೆರವು ನೀಡಬೇಕಾಗಿದೆ. ಬಸ್, ರೈಲ್ವೆ ಗಳಲ್ಲಿ ಸಂಚಾರಿಸಲು ರಿಯಾಯಿತಿ ಪಾಸ್ ನೀಡಬೇಕಾಗಿದೆ. ಆರೋಗ್ಯ ವಿಮೆ ಹಾಗೂ ವರದಿಗಾರನ ಕುಟುಂಬಸ್ಥರಿಗೆ ಆರೋಗ್ಯ ನಿಧಿಯನ್ನು ಸ್ಥಾಪಿಸಬೇಕಾಗಿದೆ. ದಿನಪತ್ರಿಕೆಗಳು ವರದಿಗಾರರನ್ನು ಚೆನ್ನಾಗಿ ನೋಡಿಕೊಳ್ಳುವಂತಾಗಲೂ ದಿನಪತ್ರಿಕೆಯ ಮುದ್ರಣಕ್ಕೆ ಅಗ್ಗದ ದರದಲ್ಲಿ ಪೇಪರ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ದಿನಪತ್ರಿಕೆಗಳ ಖರ್ಚು ವೆಚ್ಚಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಇನ್ನಾದರೂ ಯೋಚಿಸಿತೆ. ಯೋಚಿಸಬೇಕು.  ಇನ್ನೊಬ್ಬರ ಬದುಕಿಗೆ ಸುಂದರ ಅರ್ಥ ಕೊಡುವ ನಮ್ಮ ಬದುಕಿಗೂ ಸುಭದ್ರವಾದ ಮತ್ತು ಸಂತೃಪ್ತಿಯನ್ನು ದಯಪಾಲಿಸಬೇಕಾಗಿದೆ.

 

Wednesday, April 8, 2020

ಭಾರತವೆ ಮೇಲು, ಭಾರತವೆ ಮೇಲು
ರಚನೆ: ಸಂದೇಶ್.ಎಸ್.ಜೈನ್, ದಾಂಡೇಲಿ
mo:9620595555
ವಿಶ್ವದೆಲ್ಲೆಡೆ ರಣಕೇಕೆ ಬಾರಿಸುತ್ತಿದೆ ಕೊರೊನಾ
ಅಲ್ಲಿ ಮೀತಿಮೀರಿ ನಡೆಯುತ್ತಿದೆ ಸಾವಿನ ಪಯಾಣ
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಭಾರತಕ್ಕೂ ವಕ್ಕರಿಸಿತು ಈ ಮಹಾಮಾರಿ
ಜನಗಳ ಆರೋಗ್ಯ ನೆಮ್ಮದಿಗಾಯ್ತು ವಿಷಕಾರಿ
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಕೊರೊನಾವನ್ನು ಒದ್ದೊಡಿಸಲು ಭಾರತ ಲಾಕ್ ಡೌನ್
ಇದರಿಂದಾಯ್ತು ಜನಗಳ ಸಂಚಾರಕ್ಕೆ ಬ್ರೆಕ್ ಡೌನ್
ಆದರೆ ಭಾರತವೆ ಮೇಲು, ಭಾರತವೆ ಮೇಲು.

ವೈದ್ಯರು, ದಾದಿಯರು, ಪೊಲೀಸರು ರಕ್ಷಣೆಗಾಗಿ
ನಿರಂತರ ಶ್ರಮವಹಿಸಿದರು ನಮಗಾಗಿ ನಿಮಗಾಗಿ
ಆದರೆ ಭಾರತವೆ ಮೇಲು, ಭಾರತವೆ ಮೇಲು

ಒದ್ದಾಡಿದರು ನಾಡಿನ ಜನ ಒದ್ದಾಡಿದರು
ಆದರೂ ಎಲ್ಲ ಮರೆತು ಮೋ
ದಿ  ಮಾತು ಕೇಳಿದರು
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಸಂಕಷ್ಟದ ಸಮಯದಲ್ಲಿ ನಾವೆಲ್ಲ ಭಾರತಿಯರೆಂದು
ಸಂಕಷ್ಟ ಹರಣಕ್ಕಾಗಿ ಸಾರಿದೆವು ಭಾತೃತ್ವ ಒಂದೆ ಎಂದು
ಆದರೆ ಭಾರತವೆ ಮೇಲು, ಭಾರತವೆ ಮೇಲು.

 

Friday, April 3, 2020


ಹೊರಗಡೆ ಯಾಕೆ ಹೋಗುತ್ತಿರೊ, ಲಾಠಿ ರುಚಿ ಬೇಕಿದ್ರೆ ಹೋಗಿ, ಇಲ್ಲಂದ್ರೆ ದಯವಿಟ್ಟು ಮನೆಯಲ್ಲೆ ಇರ್ರಿಯಪ್ಪ, ಪ್ಲೀಸ್.

ನಿಮ್ಮವ

ಸುಯೋಗ್.ಎಸ್.ಜೈನ್


 

Thursday, April 2, 2020

ಸರಕಾರಿ ಕೆಲಸವಾದ್ರೇನೂ, ಜೀವ ಪಣಕ್ಕಿಟ್ಟು ದುಡಿಯುವುದು ಗ್ರೇಟ್ ಅಲ್ವೆ.
ಪೊಲೀಸ್ ಧ್ವಜ ದಿನಾಚರಣೆಯ ನಿಮಿತ್ತ ಪೊಲೀಸರಿಗೊಂದು ಸಲಾಂ


ಬರಹ: ಸಂದೇಶ್.ಎಸ್.ಜೈನ್, ದಾಂಡೇಲಿ.
ಕೆಲಸ ಯಾವುದಾದರೇನೂ?. ಒಟ್ಟಿನಲ್ಲಿ ಸರಕಾರಿ ಕೆಲಸವಾದ್ರೆ ಆಯ್ತೆಂಬ ಅಪೇಕ್ಷೆ ಬಹುಜನರಿಗಿದೆ. ಅದು ತಪ್ಪೆಂಬುವುದು ನನ್ನ ಅಭಿಪ್ರಾಯವಲ್ಲ. ಆದರೆ ಕೆಲವು ಸರಕಾರಿ ಕೆಲಸವಾದರೂ ಎಷ್ಟು ಕಷ್ಟ ಎಂಬುವುದರ ಅರಿವು ಸರಕಾರಿ ಕೆಲಸ ಗಿಟ್ಟಿಸಿಕೊಂಡ ಮನೆಯವರಿಗೆ ಸರಿಯಾಗಿ ತಿಳಿದಿರಬಹುದು.

ನೋಡಿ ಸ್ವಾಮಿ, ಉದ್ಯೋಗದಲ್ಲಿ ಭದ್ರತೆಯಿರಬಹುದು, ಆದರೆ ಕೆಲವೊಂದು ಸರಕಾರಿ ಕೆಲಸಗಳಲ್ಲಿ ಜೀವಭದ್ರತೆ ಇರಬಹುದೆ ಎಂಬುವುದನ್ನು ಒಮ್ಮೆ ಯೋಚಿಸಿ ನೋಡೋಣ. ವಿಶೇಷವಾಗಿ ಗಡಿ ಕಾಯುವ ಸೈನಿಕರು, ನಮ್ಮ ಸಮಾಜದ ಶಾಂತಿ ಕಾಯುವ ಪೊಲೀಸರು ಮತ್ತು ದೇಶವನ್ನು ಕಾಡುತ್ತಿರುವ ಮಹಾಮಾರಿ ರೋಗಗಳಿಗೆ ತುತ್ತಾದವರನ್ನು ತಪಾಸಣೆಗೈಯುವ ಮತ್ತು ಅವರುಗಳ ಆರೋಗ್ಯ ಸಂರಕ್ಷಿಸುವ ಸರಕಾರಿ ವೈದ್ಯರುಗಳು, ದಾದಿಯರು, ಇತ್ತ ಇಡೀ ಊರೇ ಮುಳುಗಲಿ, ಆದ್ರೆ ಗಂಟೆ ನಿಲ್ಲದಂತೆ ಪ್ರತಿನಿತ್ಯ ಊರು ಸ್ವಚ್ಚ ಮಾಡುವ ಪೌರಕಾರ್ಮಿಕರ ಕೆಲಸ ನಿಜಕ್ಕೂ ಅತ್ಯಂತ ಸರ್ವಶ್ರೇಷ್ಟ ಮತ್ತು ಜೀವಭದ್ರತೆಯಿಲ್ಲದ ಕೆಲಸ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು. ಜೀವಕ್ಕೆ ಭದ್ರತೆಯಿಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ಇವರ ಸೇವಾತತ್ಪರತೆಗೆ ಮನದುಂಬಿ ಕೃತಜ್ಞತೆಗಳು.

ಕಳೆದ ಕೆಲ ತಿಂಗಳುಗಳಿಂದ ಇಡೀ ಪ್ರಪಂಚವನ್ನೆ ಕಾಡಿಸುತ್ತಿರುವ ಮಹಾಮಾರಿ ಕೊರೊನಾದ ವಿರುದ್ದ ಕಾಲಿಗೆ ಚಕ್ರ ಕಟ್ಟಿ ಶೃದ್ದೆಯಿಂದ ಕೆಲಸ ನಿರ್ವಹಿಸುತ್ತಿರುವವರು ಇವರುಗಳೆ ಅಲ್ಲವೆ. ದುಡ್ಡಿದ್ದಾಗ, ಸಹಜ ಸ್ಥಿತಿಯಲ್ಲಿರುವಾಗ ಖಾಸಗಿ ಆಸ್ಪತ್ರೆಗೆ ದುಂಬಾಲು ಬೀಳುತ್ತಿರುವ ಮಧ್ಯಮ ವರ್ಗದವರಿಂದ ಹಿಡಿದು ಸಿರಿವಂತರನ್ನು ಸಹ ಸರಕಾರಿ ಆಸ್ಪತ್ರೆಗೆ ಎಳೆದು ತಂದ ಕೊರೊನಾ ಸೋಂಕು ನಿವಾರಣೆಗೆ ಇವರೆಲ್ಲರ ಶ್ರಮ ಸಾರ್ಥಕವಾಗಲಿ.

ತನ್ನ ಮಡದಿ, ಮಕ್ಕಳು, ತಂದೆ, ತಾಯಿ ಸಂಸಾರ ಇವೆಲ್ಲವೂ ಇದ್ದರೂ ಕರ್ತವ್ಯವೇ ನಮ್ಮ ಮೊದಲ ಗುರಿಯೆಂದು ಸೇವೆ ಸಲ್ಲಿಸುತ್ತಿರುವ ಪೊಲೀಸರು, ವೈದ್ಯರುಗಳು, ದಾದಿಯರು, ಸೈನಿಕರುಗಳು, ಪೌರ ಕಾರ್ಮಿಕರುಗಳ ಸೇವಾ ಮನಸ್ಸು ಅಭಿನಂದಾರ್ಹವಾದುದು. ಇಂದು ಪೊಲೀಸ್ ಧ್ವಜ ದಿನಾಚರಣೆ. ಈ ನಿಟ್ಟಿನಲ್ಲಿ ಪೊಲೀಸರ ಬಗ್ಗೆ ನಾಲ್ಕಾಕ್ಷರವಾದರೂ ಬರೆಯಬೇಕೆಂಬ ಹಂಬಲ ಮತ್ತು ತುಡಿತ ನನ್ನದು.

ಹೌದು ಬಂಧುಗಳೆ, ಪೊಲೀಸರು ಲಾಠಿ ಎತ್ತಿದರೇ ನಾವು ಬೈಯುತ್ತೇವೆ. ಆದ್ರೆ ಲಾಠಿ ಯಾಕೆ ಎತ್ತಿದ್ದಾರೆ ಎನ್ನುವುದನ್ನು ನಾವು ಅರಿಯುವ ಗೋಜಿಗೆ ಹೋಗುವುದಿಲ್ಲ. ಒಂದಂತು ನಿಜ, ಪೊಲೀಸರು ರಾಕ್ಷಸರಲ್ಲ. ಅವರು ಸಹ ನಮ್ಮಂತೆ ಮನುಷ್ಯರು. ಅವರಲ್ಲಿಯೂ ಮಾನವೀಯತೆಯಿದೆ, ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯಿದೆ ಎನ್ನುವುದನ್ನು ತಿಳಿಯುವುದೇಕೆ, ನಾವು ಈಗಾಗಲೆ ನೋಡಿದ್ದೇವೆ. ಗಟಾರದಲ್ಲಿ ಹಂದಿ ಬಿದ್ದರೂ ಮೊದಲು ಅದರ ವಾಸನೆ ಬಡಿಯುವುದು ಪೊಲೀಸರಿಗೆ ಎನ್ನುವುದು ನಮ್ಮ ಗಮನಕ್ಕಿರಲಿ. ಕೊರೊನಾ ಸೋಂಕು ನಿವಾರಣೆಗಾಗಿ ಭಾರತ ಲಾಕ್ ಡೌನ್ ಇದ್ದು, ಈ ಸಂದರ್ಭದಲ್ಲಿ ನಿರ್ಗತಿಕರು, ಬಿಕ್ಷುಕರು ಅನ್ನ ಆಹಾರವಿಲ್ಲದೇ ವಿಲ ವಿಲ ಒದ್ದಾಡುತ್ತಿದ್ದಾಗ ಅಂಥವರುಗಳಿಗೆ ಮೊದಲು ತಿನ್ನಲು ಆಹಾರ ಒದಗಿಸಿ, ಉಳಿದವರಿಗೆ ಸ್ಫೂರ್ತಿಯಾದವರು ಇದೇ ನಮ್ಮ ಲಾಠಿ ಹಿಡಿದ ಪೊಲೀಸರು.

ಇದ್ದದ್ದನ್ನು ಇದ್ದ ಹಾಗೆ ಹೇಳಬೇಕಾದರೇ, ನನ್ನ ಪ್ರಕಾರ ಪೊಲೀಸರು ತನ್ನ ಇತಿ ಮಿತಿಯನ್ನು ದಾಟಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಊರಿಂದ ಇನ್ನೊಂದು ಊರಿಗೆ ಹೋದಾಗ ನಮ್ಮ ಹಣ ಕಳೆದು ಹೋದರೇ, ಆ ಸಂದರ್ಭದಲ್ಲಿ ಮರಳಿ ಊರು ಸೇರಬೇಕಾದರೇ ಆ ಊರಿನ ಪೊಲೀಸರೆ ಮಾನವೀಯ ಸಹಾಯ ಮಾಡುವುದು ಎನ್ನುವುದನ್ನು ನಾವು ಮರೆಯುವಂತಿಲ್ಲ. ತನ್ನ ಕೆಲಸ ಏನು, ಅದರಂತೆ ಮಾಡುತ್ತೇನೆಂದು ಹಟ ಹಿಡಿದು ಅದೇ ರೀತಿಯಿದ್ದಲ್ಲಿ ಇಂದು ಸಮಾಜದ ಸ್ವಸ್ಥ ಉನ್ನತಿಯೆಡೆಗೆ ಸಾಗಲು ಸಾಧ್ಯವಾದಿತೆ? ಖಂಡಿತಾ ಇಲ್ಲ. ಅದೇಷ್ಟೊ ಗಂಡ-ಹೆಂಡತಿ, ಹೆತ್ತವರು-ಮಕ್ಕಳು, ಸಹೋದರರು ಹಾಗೂ ಸಹೋದರಿಯರು ಮತ್ತು ನೆರೆಹೊರೆಯವರ ನಡುವೆ ನಡೆಯುವ ವಾಗ್ವಾದಗಳು ಪೊಲೀಸ್ ಮೆಟ್ಟಿಲೇರಿ ಅದು ಎಫ್.ಐ.ಆರ್ ಆಗ್ಬೇಕೆಂದು ಆಗ್ರಹವಿತ್ತಾದರೂ, ಎರಡು ಕಡೆಯವರನ್ನು ಮನವೊಲಿಸಿ, ಅವರಿವರುಗಳ ತಪ್ಪಿಗೆ ಪೊಲೀಸರೆ ಕೈಮುಗಿದು, ಅವರುಗಳನ್ನು ಸಮಾಧಾನಪಡಿಸಿ, ರಾಜಿ ಮಾಡಿಸಿ, ಸಮಾಜದಲ್ಲಿರುವ ಸಂಘರ್ಷವನ್ನು ಹೋಗಲಾಡಿಸಿ ಸಾಮಾರಸ್ಯದ ಸಮಾಜ ಸೃಷ್ಟಿಗೆ ಕಾರಣರಾಗುತ್ತಿರುವವರು ಸಹ ನಮ್ಮ ಪೊಲೀಸರೆ. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗೆ ಹೋಗಿ ರಾಜಿ ಸಂಧಾನದ ಮುಚ್ಚಳಿಕೆ ಪತ್ರಗಳ ರಾಶಿ ರಾಶಿ ಪೈಲು ನೋಡಿದರೇ ಅದರ ನಿಜ ಅರಿವಾಗಲು ಸಾಧ್ಯವಿದೆ.

ಕೊರೊನಾವಿರಲಿ, ಬರಗಾಲವಿರಲಿ, ಪ್ರವಾಹವಿರಲಿ ಒಟ್ಟಿನಲ್ಲಿ ಸಂಕಷ್ಟದ ಸಮಯದಲ್ಲೂ ಪೊಲೀಸರಿಗೆ ಸಂಕಷ್ಟ, ಇನ್ನೂ ದೀಪಾವಳಿ ಇರಲಿ, ಕ್ರಿಸ್ ಮಸ್, ರಂಝಾನ್ ಇರಲಿ, ನಮ್ಮ ಪೊಲೀಸರಿಗೆ ಯಾವ ಹಬ್ಬನೂ ಇಲ್ಲ. ಎಟ್ ಲಿಸ್ಟ್ ಹಬ್ಬದ ದಿನವೂ ತನ್ನ ಮಡದಿ-ಮಕ್ಕಳ ಜೊತೆ ಸಂತೃಪ್ತಿಯಿಂದ, ಸಮಾಧಾನದಿಂದ ಊಟ ಮಾಡಲು ಆಗದಂತಹ ಕರ್ತವ್ಯ ನಮ್ಮ ಪೊಲೀಸರದ್ದು. ಹೆಂಡತಿ ತುಂಬು ಗರ್ಭಿಣಿಯಾಗಿ ಹೆರಿಗೆ ನೋವು ಬಂದಾಗಲೂ ತನ್ನ ಮುದ್ದಿನ ಮಡದಿಯ ಬಳಿ ಇರಲಾಗದೇ ಯಾತನೆ ಅನುಭವಿಸುವ ಪೊಲೀಸರ ಸ್ಥಿತಿ ಮನಕಲುಕುವಂತಹದ್ದೆ ಆಗಿದೆ. ಹೆತ್ತಮ್ಮ ಅನಾರೋಗ್ಯ ಪೀಡಿತಳಾಗಿ ಅಸ್ಪತ್ರೆಗೆ ಸೇರಿಸಿ, ಊರಿಂದ ಸುದ್ದಿ ಬಂದು, ಊರಿಗೆ ಹೊರಡುವಷ್ಟರಲ್ಲಿ ತಾಯಿಯ ಮರಣದ ಸುದ್ದಿ ಬರಸಿಡಿಲಿನಂತೆ ಬರುವಾಗ ಎಂಥಹ ಮಗನಿಗೂ ಹೇಗಾಗಬೇಡ ಅಲ್ಲವೆ. ತನ್ನ ಪ್ರೀತಿಯ ಮಕ್ಕಳು ಅಪ್ಪ ನಮ್ಮನ್ನು ಜಾತ್ರೆಗೆ ಕರ್ಕೊಂಡು ಹೋಗು ಎಂದು ಒತ್ತಾಯಿಸುತ್ತಿರುವಾಗ ಜಾತ್ರೆ ಮುಗಿದ ಮರುದಿನ ಜಾತ್ರೆಯ ಸಂತೆಗೆ ಕರೆದುಕೊಂಡು ಹೋಗಿ ಮಾರಟವಾಗದೇ ಉಳಿದ ಪೀಪಿ, ಬಲೂನ್ ಹೀಗೆ ಆಟದ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಾಗ ಅದುವೆ ಪೊಲೀಸ್ ಮಕ್ಕಳಿಗೆ ಬಹುದೊಡ್ಡ ಕಾಣಿಕೆ. ಜನಜಂಗುಲಿಯ ಮಧ್ಯೆ ಜಾತ್ರೆಗೆ ಹೋಗುವುದೇ ಮಜ. ಆದ್ರೆ ನಮ್ಮ ಪೊಲೀಸರಿಗೆ ಜನಜಂಗುಲಿ ಮುಗಿದ ಮೇಲೆ ಜಾತ್ರೆಯ ಸಂತೆ ನೋಡುವುದು, ತೊಟ್ಟಿಲಲ್ಲಿ ಕೂತ್ಕೊಳ್ಳಲು ಭಾಗ್ಯ ಸಿಗುವುದು ಎನ್ನುವುದು ಸತ್ಯ ಸಂಗತಿ. ಪೊಲೀಸಪ್ಪನ ಮಡದಿ ತಲೆನೋವಿದೆ ಬರುವಾಗ ಗುಳಿಗೆ ತನ್ನಿ ಎಂದು ಕರೆ ಮಾಡಿ ತಿಳಿಸಿದ್ರೆ, ಹೊತ್ತಲ್ಲದ ಹೊತ್ತಿಗೆ ಗುಳಿಗೆ ತೆಕೊಂಡು ಹೋಗುವುದರೊಳಗೆ ಆಕೆಯ ತಲೆ ನೋವು ವಾಸಿಯಾಗಿರುವ ಉದಾಹರಣೆಗಳು ಎಲ್ಲ ಪೊಲೀಸ್ ಮನೆಯ ವಾಸ್ತವ ಸ್ಥಿತಿ.

ಸ್ನೇಹಿತರೇ, ಈಗ ನಮ್ಮನ್ನು ಕೊರೊನಾ ತತ್ತರಿಸುವಂತೆ ಮಾಡಿದೆ. ಕೊರೊನಾ ಸೋಂಕಿತರು ಇರಬಹುದು, ಶಂಕಿತರು ಇರಬಹುದು. ಅವರಾಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದರೇ ಓಕೆ. ಇಲ್ಲದಿದ್ದರೇ ಅಂಥವರುಗಳನ್ನು ಹುಡುಕಿ ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿಯೂ ಮತ್ತು ಆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ.

ನಮಗೆ ನಮ್ಮ ವಾಹನ ನಿಲ್ಲಿಸಿದ್ರೂ, ನಮಗೆ ಲಾಠಿಯೇಟು ಕೊಟ್ರೂ ಎಂದು ಹಿಂದಿನಿಂದ ಪೊಲೀಸರಿಗೆ ಬೈಯುವ ಬದಲು, ಇನ್ನಾದರೂ ನಾವು ಕಾನೂನು ರೀತಿಯಲ್ಲಿ ಬದುಕು ಕಟ್ಟಿಕೊಂಡರೆ ಅದುವೆ ನಿಜವಾದ ಜೀವನವಾಗುತ್ತೆ ಮತ್ತು ನಮ್ಮನ್ನು ಕಾಯುವ ಪೊಲೀಸರಿಗೆ ಗೌರವ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ದ್ವಜ ದಿನಾಚರಣೆಯ ನಿಮಿತ್ತ ಈ ರೀತಿಯ ಪ್ರತಿಜ್ಞೆ ಮಾಡೋಣ.

ಏನಾಂತೀರಿ,

ನಿಮ್ಮವ

ಸಂದೇಶ್.ಎಸ್.ಜೈನ್
ಮೊ: 9620595555

 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...