Tuesday, July 28, 2020

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ
ಮಾನವೀಯ ಸೇವಾಕೈಂಕರ್ಯದ ಜನಸೇವಕ
ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾನವೀಯತೆಯ ಗುಣಧರ್ಮವನ್ನು ಹೊಂದಿದ ಸರಳ ವ್ಯಕ್ತಿತ್ವ ಸಹೃದಯಿ. ಮಾತಿಗೆ ನಿಂತರೆ ಎಂಥವರನ್ನು ಆಕರ್ಷಿಸಬಲ್ಲ ಮಾತುಗಾರಿಕೆ, ಒಟ್ಟಿನಲ್ಲಿ ಮಾತಿನ ಮಲ್ಲ. ಜನಸೇವೆಯಲ್ಲಿ ಜೀವನಸಂತಸ ಕಂಡ ಅಪರೂಪದ ಅಪೂರ್ವ ವ್ಯಕ್ತಿ ಇವರು. ಅಂದ ಹಾಗೆ, ಯಾರವರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲಗಾರ ಬೇರೆ ಯಾರು ಅಲ್ಲ, ನಮ್ಮವರೆ ಆದ ರವೀಂದ್ರ ಶಾಹ ಅವರು. ಇಂದವರಿಗೆ ಹುಟ್ಟುಹಬ್ಬದ ಸಂಭ್ರಮ, ಸಡಗರ. ಈ ಸಡಗರಕ್ಕೊಂದು ಅಭಿಮಾನದ ನುಡಿರೂಪದ ಶುಭಾಶಯ ಕೋರಲು ತಡವಾಗಿ ಅಣಿಯಾಗಿದ್ದೇನೆ.
ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಒಲುಮೆಯ ಸಹೋದರ ರವೀಂದ್ರ ಶಾಹ ಅವರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತ ಅವರ ಕೆಲವೊಂದು ವಿಚಾರವನ್ನು ತಮಗೆಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತೇನೆ.

ಮೂಲತ: ಕನ್ನಡಿಗರಲ್ಲದಿದ್ದರೂ ನಿರರ್ಗಳವಾಗಿ ಕನ್ನಡ ಮಾತನಾಡುವ ಮಾತಿನ ಮಲ್ಲ ನಮ್ಮ ರವೀಂದ್ರ ಶಾಹ ಅವರು ಕಾಗದ ಕಾರ್ಖಾನೆಯ ನಿವೃತ್ತ ಉದ್ಯೋಗಿ ದಿ: ಜಗದೀಶ ಶಾಹ ಹಾಗೂ ಸುಸಂಸ್ಕೃತ ಗೃಹಿಣಿ ದಿ: ವಿದ್ಯಾದೇವಿ ದಂಪತಿಗಳ ಮುದ್ದಿನ ಮಗನಾಗಿದ್ದಾರೆ. ರವೀಂದ್ರ ಅವರಿಗೆ ಮಂಜು ಶಾಹ ಮತ್ತು ರಾಜೇಶ ಶಾಹ ಎಂಬ ಅಕ್ಕ ಮತ್ತು ಅಣ್ಣ ಹಾಗೂ ಕಿರಣ ಶಾಹ ಎಂಬ ಮಮತೆಯ ತಂಗಿ ಇದ್ದಾರೆ.

ಸುಸಂಸ್ಕೃತ ಮನೆತನದಲ್ಲಿ ಜನ್ಮವೆತ್ತ ನಮ್ಮ ರವೀಂದ್ರ ಅವರು ಬಾಲಕನಿರುವಾಗಲೆ ಚುರುಕುತನದ ಮೂಲಕ ಎಲ್ಲರ ಮನಸ್ಸು ಗೆದ್ದವರು. ಸಹೋದರ ಮತ್ತು ಸಹೋದರಿಯರಿಬ್ಬರ ಪ್ರೀತಿಯ ನೆರಳಲ್ಲಿ ಬೆಳೆದ ರವೀಂದ್ರ ಅವರು ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಂಗೂರನಗರ ಹಿಂದಿ ಶಾಲೆಯಲ್ಲಿ ಪಡೆದು, ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಮುಂದೆ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದರು. ಕಾಲೇಜು ಜೀವನದಲ್ಲೆ ನಾಯಕತ್ವವನ್ನು ಬೆಳೆಸಿಕೊಂಡ ರವೀಂದ್ರ ಶಾಹ ಅವರು ಬಂಗೂರನಗರ ಪದವಿ ಕಾಲೇಜಿನ
ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿ, ವಿದ್ಯಾರ್ಥಿಗಳ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದರು.
 

 ವಿದ್ಯಾರ್ಥಿ ದೆಸೆಯಲ್ಲಿರುವಾಗಲೆ ಅತ್ಯುತ್ತಮ ಕ್ರೀಡಾಪಟುವಾಗಿ, ಭಾಷಣಕಾರರಾಗಿ ಗಮನ ಸೆಳೆದಿರುವ ರವೀಂದ್ರ ಅವರು ಒಬ್ಬ ಸಮರ್ಥ ಸಾಂಸ್ಕೃತಿಕ ಪಟುವಾಗಿ ಎಲ್ಲರ ಮನೆಗೆದ್ದಿರುವುದು ಅವರ ವಿಶೇಷತೆಗಳಲ್ಲೊಂದು ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.

ಕಾಲೇಜು ಶಿಕ್ಷಣ ಮುಗಿದ ಮೇಲೆ ಕಾಗದ ಕಾರ್ಖಾನೆಯಲ್ಲೆ ನೌಕರಿ ಗಿಟ್ಟಿಸಿದ ರವೀಂದ್ರ ಶಾಹ ಅವರು ಇದೀಗ ಕಾರ್ಖಾನೆಯ ಗೋಡೌನ್ ವಿಭಾಗದಲ್ಲಿ ಅಧಿಕಾರಿಯಾಗಿ ಎಲ್ಲರು ಮೆಚ್ಚುವಂತೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೇಲಾಧಿಕಾರಿಗಳಿಗೆ ನೆಚ್ಚಿನವರಾಗಿ, ಸಹದ್ಯೋಗಿಗಳಿಗೆ ಆತ್ಮೀಯರಾಗಿ, ತನ್ನ ಕೈಕೆಳಗಿನ ಸಿಬ್ಬಂದಿಗಳಿಗೆ ಮನದಿಚ್ಚೆಯ ಅಣ್ಣನಾಗಿರುವ ರವೀಂದ್ರ ಶಾಹ ಅವರ ಗುಣಧರ್ಮವನ್ನು ಎಲ್ಲರು ಮೆಚ್ಚುತ್ತಾರೆ.

ವೃತ್ತಿ ಬದುಕಿನ ಜೊತೆಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ರವೀಂದ್ರ ಶಾಹ ಅವರು ಬಿಜೆಪಿ ಮೂಲಕ ರಾಜಕೀಯಕ್ಕೆ ಎಂಟ್ರಿ ಹೊಡೆದು, ಆನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ, ಇತ್ತೀಚಿನ ಕೆಲ ವರ್ಷಗಳ ಹಿಂದೆ ಮರಳಿ ಮಾತೃಪಕ್ಷವಾದ ಬಿಜೆಪಿಗೆ ಸೇರಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ. ಪಕ್ಷದ ತತ್ವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿಯಾಗಿರುವ ರವೀಂದ್ರ ಶಾಹ ಅವರು ಎಲ್ಲಿದ್ದರೂ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅದು ಅವರ ಶಕ್ತಿ ಎಂದರೆ ತಪ್ಪಗಲಾರದು.

ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ದಾರ್ಮಿಕ ಕಾರ್ಯಗಳಲ್ಲೂ ಸೈ ಎನಿಸಿಕೊಂಡವರು ನಮ್ಮ ಶಾಹ ಸಾಹೇಬ್ರು. ಅಂದ ಹಾಗೆ ನಗರದಲ್ಲಿ ವಿಶಿಷ್ಟವಾಗಿ ನಡೆಯುವ ಛಟ್ ಹಬ್ಬದ ಪೂಜಾ ಸಮಿತಿಯ ಅಧ್ಯಕ್ಷರಾಗಿ ಛಟ್ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಂಸ್ಕಾರಬದ್ದವಾಗಿ ನಡೆಸಿಕೊಂಡು ಬರುತ್ತಿರುವ ಕೀರ್ತಿ ನಮ್ಮ ರವೀಂದ್ರ ಅವರಿಗೆ ಸಲ್ಲಬೇಕು.

ವೈದಿಕ ಕಾರ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ರವೀಂದ್ರ ಶಾಹ ಅವರು ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಅರಿತವರು. ಇಂಥಹ ಸಂದರ್ಭದಲ್ಲಿ ರವೀಂದ್ರ ಶಾಹ ಅವರ ಸಹಕಾರ ಅವಶ್ಯವಾಗಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೇ ಯಾವುದೇ ಸಭೆ, ಸಮಾರಂಭ, ಮದುವೆ ಇನ್ನಿತರ ಕಾರ್ಯಗಳಲ್ಲಿ ಊಟದ ವ್ಯವಸ್ಥೆಗೆ ಒಂದು ಹೊಸರೂಪ ಕೊಟ್ಟು ನಗರದ ಜನತೆಯ ಮನಗೆದ್ದಿರುವುದು ಸುಳ್ಳಲ್ಲ.
ಒಬ್ಬ ಆದರ್ಶ ಸಮಾಜಸೇವಕರಾಗಿ, ಅಪ್ಪಟ ರಾಜಕಾರಣಿಯಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪಟುವಾಗಿ ಗಮನ ಸೆಳೆದಿರುವ ರವೀಂದ್ರ ಶಾಹ ಅವರು ಎಲ್ಲರೊಂದಿಗೆ ಎಲ್ಲರಂತಿದ್ದು, ಸರಳ ಜೀವನ ನಡೆಸುವುದರ ಮೂಲಕ ಸ್ವಾಭಿಮಾನದ ಬದುಕು ನಡೆಸಿ, ಜೀವನ ಯಶಸ್ಸು ಕಂಡಿದ್ದಾರೆ.

ತಂದೆ ತಾಯಿಗಳ ಸಂಸ್ಕಾರ ಮತ್ತು ಅವರುಗಳ ಆಶೀರ್ವಾದ, ಸಹೋದರ, ಸಹೋದರಿಯರ ಮಾರ್ಗದರ್ಶನ ಮತ್ತು ವಾತ್ಸಲ್ಯ, ಮಮತೆಯ ಮಡದಿ ಅಂಜಲಿಯವರ ನಿರಂತರ ಪ್ರೋತ್ಸಾಹ, ಮಕ್ಕಳಾದ ಸಮೀಕ್ಷಾ, ಶ್ರೇಯಾ ಮತ್ತು ವಿರಾಟ್ ಅವರುಗಳ ಅಪ್ಪುಗೆಯ ಪ್ರೀತಿ, ವಾತ್ಸಲ್ಯ ರವೀಂದ್ರ ಶಾಹ ಅವರ ಜೀವನಯಶಸ್ಸಿನಲ್ಲಿ ಬಹುಮೂಲ್ಯ ಪಾತ್ರವನ್ನು ವಹಿಸಿದೆ.

ಅಹಂ ಇಲ್ಲದ ಸರಳತೆಯನ್ನು ಮೈಗೂಡಿಸಿಕೊಂಡ ಸಹೋದರ ರವೀಂದ್ರ ಶಾಹ ಅವರಿಗೆ ಮಗದೊಮ್ಮೆ ಹುಟ್ಟುಹಬ್ಬದ ಶುಭವನ್ನು ಕೋರುತ್ತಾ, ನೂರು ಕಾಲ ಸುಖವಾಗಿರಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್.

Tuesday, July 7, 2020

ನಮ್ಮೆಲ್ಲರ ಅಚ್ಚುಮೆಚ್ಚಿನ ಪೈ ಮಾಮಿ ಇನ್ನಿಲ್ಲ
ರೂಪಾ ಶ್ರೀಧರ ಪೈ ಅಸ್ತಂಗತ
ಅವರು ಸ್ವಂತ ಅಮ್ಮ ಅಲ್ಲದಿರಬಹುದು. ಆದರೆ ಅವರ ಮಕ್ಕಳಂತೆ ನನ್ನನ್ನು ಪ್ರೀತಿಸಿ, ಮುದ್ದಿಸಿ, ಹರಸಿ ಆಶೀರ್ವದಿಸಿದ ರೀತಿಯಂತು ಸದಾ ಸ್ಮರಣೀಯ. ಸಣ್ಣ ಜ್ವರ ಬಂದಿದೆ ಎಂದೂ ಗೊತ್ತಾದರೂ ಸಾಕು, ಸ್ವತ: ಅವರೆ ಮದ್ದು ಸಿದ್ದಪಡಿಸಿ, ಕೈಯಾರೆ ಔಷಧಿ ನೀಡಿ ಆರೈಕೆ ಮಾಡುವ ಅವರ ಗುಣಧರ್ಮವೆ ನಮಗೆಲ್ಲ ಅಕ್ಕರೆಯ ಅಮ್ಮನಾಗಲು ಕಾರಣವಾಯಿತು. ಅತ್ಯಂತ ವಾತ್ಸಲ್ಯಮಯಿ ಅಮ್ಮನಾಗಿದ್ದ ನಮ್ಮಮ್ಮ ಪೈ ಮಾಮಿ ಇಂದು ಅಸ್ತಂಗತರಾಗಿದ್ದಾರೆ. ಮನಸ್ಸಿಗೆ ಬಹಳ ನೋವಾನಿಸಿದೆ. ಪುಣ್ಯಕಾರ್ಯಗಳ ಮೂಲಕ ಜನಸ್ನೇಹಿಯಾಗಿ, ಮಾನವೀಯತೆಯ ಪ್ರತಿನಿಧಿಯಾಗಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ಪೈ ಮಾಮಿ ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಲು ಅಷ್ಟು ಸುಲಭವಿಲ್ಲ. ಕರಿದ ತಿಂಡಿ ಮಾಡಿದಾಗಲೆಲ್ಲ ಕರೆದು ಉಣ ಬಡಿಸಿದ ಆ ದಿನಗಳು ಇನ್ನು ನೆನಪು ಮಾತ್ರ.

ವನಶ್ರೀನಗರದ ನಿವಾಸಿಯಾಗಿರುವ ಪೈ ಮಾಮಿ ಅಂದರೆ ರೂಪಾ ಶ್ರೀಧರ ಪೈ (ವ:70) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಧಾರವಾಡದಲ್ಲಿರುವ ಮಗಳ ಮನೆಗೆ ಹೋಗಿದ್ದ ಅವರು ಬುಧವಾರ ಸ್ವರ್ಗಸ್ಥರಾಗಿದ್ದಾರೆ.

ಅಗಲಿದ ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಮರಳಿ ಜನ್ಮವೆತ್ತಿ ಬನ್ನಿ ಎಂಬ ಪ್ರಾರ್ಥನೆಯೊಂದಿಗೆ.

ದುಖ:ತೃಪ್ತ

ಸಂದೇಶ್.ಎಸ್.ಜೈನ್

 

Sunday, July 5, 2020

ನಮ್ಮ ನಿಮ್ಮೆಲ್ಲರ ಪ್ರೀತಿಯ ಅನಿಲ್ ಎಸ್.ಕೆ ಇನ್ನು ನೆನಪು ಮಾತ್ರ
ಅಗಲಿದ ಅನಿಲ್ ರಿಗೆ ಭಾವಪೂರ್ಣ ಶೃದ್ದಾಂಜಲಿ
ಎಂಥ ಶಾಕಿಂಗ್ ನ್ಯೂಸ್. ನಂಬಲಾಗುತ್ತಿಲ್ಲ. ಆದರೂ ಘಟನೆ ನಡೆದೆ ಹೋಗಿದೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಸ್ನೇಹಿತರು, ದಾಂಡೇಲಿ ನಗರದ ಸುಪ್ರಸಿದ್ದ ಡ್ಯಾನ್ಸರ್, ಅನಿಲ್ ಎಸ್.ಕೆ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಪ್ರವರ್ತಕರು ಆಗಿರುವ ಅನಿಲ್. ಎಸ್.ಕೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬರಸಿಡಿಲ ರೂಪದಲ್ಲಿ ಬಂದ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.  ದಾಂಡೇಲಿಯ ಅದೇಷ್ಟೊ ಮಕ್ಕಳನ್ನು ನೃತ್ಯಗಾರರನ್ನಾಗಿ ಮಾಡಿ ಜಿಲ್ಲೆ, ರಾಜ್ಯಮಟ್ಟದವರೆಗೆ ಗುರುತಿಸುವಂತಾಗಲೂ ಕಾರಣೀಕರ್ತನಾದ ಅನಿಲ್. ಎಸ್.ಕೆ ಮಕ್ಕಳೊಂದಿಗೆ ಮಕ್ಕಳಂತಿದ್ದು, ಮಕ್ಕಳನ್ನು ಬೆಳೆಸಿ, ಪ್ರೋತ್ಸಾಹಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಒಬ್ಬ ಪರಿಪಕ್ವ, ಆರೋಗ್ಯವಂತ ನವಚೈತನ್ಯದ 40 ವರ್ಷದ ಯುವಕ ಇನ್ನು ನೆನಪು ಮಾತ್ರ ಅಂದರೆ ಇದೆಂಥ ದುರ್ದೈವ್ಯ.

ಓ, ಭಗವಂತ ಯಾಕೆ ಹಿಂಗೆ ಮಾಡ್ತಿಯಾ, ನೂರಾರು ಕನಸುಗಳನ್ನಿಟ್ಟು ಕಠಿಣ ಪರಿಶ್ರಮದ ಸಾಧನೆಯ ಹಾದಿಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ನಮ್ಮ ಅನಿಲ್ ನ ವೇಗವನ್ನು ನಿಲ್ಲಿಸಿ ಬಿಟ್ಟಿಯಲ್ಲ. ಇವತ್ತು ನಗರದ ಸಾಂಸ್ಕೃತಿಕ ಕ್ಷೇತ್ರ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡು ಬಡವಾಗಿದೆ. ನಗರದ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಹೊರಟಿದ್ದ ಅನಿಲ್ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವೆ.

ಸಾವು ಬರ್ಬೇಕು, ಆದ್ರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಅಲ್ಲವೆ ಅಲ್ಲ. ಜೀವನದ ಕಹಿಯನ್ನುಂಡು ಸಿಹಿಯನ್ನು ಉಣ್ಣಲಾರಂಭಿಸುವಾಗ್ಲೆ ಅನಿಲ್ ನಮ್ಮನ್ನೆಲ್ಲ ಬಿಟ್ಟು ಬರಬಾರದ ಲೋಕಕ್ಕೆ ಹೊರಟು ಹೋಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೇನು, ನಮ್ಮ ಮುಂದೆ ಓಡಾಡಿಕೊಂಡಿದ್ದ ಅನಿಲ್ ಅವರಿಗೆ ಓಂ ಶಾಂತಿ ಬಿಟ್ಟು ಬೇರೆ ಏನನ್ನು ಹೇಳಲಾಗದು.

ಓಂ ಶಾಂತಿ.

ಮರಳಿ ಜನ್ಮವೆತ್ತಿ ಬನ್ನಿ,

ದುಖ:ತೃಪ್ತ ಗೆಳೆಯ

ಸಂದೇಶ್.ಎಸ್.ಜೈನ್

 

Sunday, June 7, 2020

ಸಂತಸದ ಬದುಕಿನ ಜೀವಸ್ನೇಹಿತ ಸಂತೋಷರಿಗೆ ಜನ್ಮದಿನದ ಸಂಭ್ರಮ
ಶ್ರಮಸಾಧನೆಯ ಮೂಲಕ ಜೀವನ ಯಶಸ್ಸು ಕಂಡ ಶ್ರಮಜೀವಿ
ಅವರು ಬೇರೆ ಯಾರು ಅಲ್ಲ. ನನ್ನ ಸಂಬಂಧಿಯು ಹೌದು, ಅತ್ಯಂತ ಪ್ರೀತಿಯ ಜೀವಸ್ನೇಹಿತರು ಹೌದು. ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ಜೈನ್ ರೆಸ್ಟೊರೆಂಟಿನ ಮಾಲಕರು ಆಗಿರುವ ನೆಚ್ಚಿನ, ಮೆಚ್ಚಿನ ಸಂತೋಷ್ ಜೈನ್ ಅವರು. ಅಂದ ಹಾಗೆ ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮದ ನಡುವೆ ನುಡಿ ರೂಪದಲ್ಲಿ ನನ್ನದೊಂದು ಶುಭ ಹಾರೈಕೆ.

ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಈಗಿನ ಉಜಿರೆ ಗ್ರಾಮದ ಕೈಯಾಂಗ್ ನಿವಾಸಿಯಾದ ಇವರು ದಿ: ಫಣಿರಾಜ್ ಅಜ್ರಿ ಹಾಗೂ ಪ್ರೇಮ ದಂಪತಿಗಳ ಮುದ್ದಿನ ಮಗ ಈ ನಮ್ಮ ಸಂತೋಷ್. ಸಂತೋಷ್ ಅವರು ಅಣ್ಣ ಪ್ರಶಾಂತ, ಅಕ್ಕ ಪ್ರಮೀಳಾ ಮತ್ತು ತಂಗಿ ಸುರೇಖಾ ಹಾಗೂ ಅವರ ಚಿಕ್ಕಪ್ಪ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಗಟ್ಟಿ ಧ್ವನಿಯಾಗಿರುವ ಅಪ್ರತಿಮ ರಾಜಕಾರಣಿ ಮುನಿರಾಜ ಅಜ್ರಿ ಕುಟುಂಬಸ್ಥರ ಜೊತೆ ಬೆಳೆದವರು. 

ಹುಟ್ಟೂರಲ್ಲೆ ಶಿಕ್ಷಣ ಪಡೆದ ನಂತರ ಕಾಯಕಯೋಗಿ ತಂದೆ ದಿ:ಪಣಿರಾಜ ಅಜ್ರಿಯವರ ಜೊತೆ ಮದುವೆ, ದೊಡ್ಡ ದೊಡ್ಡ ಸಮಾರಂಭಗಳ ಅಡುಗೆ ಗುತ್ತಿಗೆಯನ್ನು ವಹಿಸಿ ಅವರ ಜೊತೆ ತಾನು ದುಡಿಯಲಾರಂಭಿಸಿದರು. ಹೀಗೆ ಬೆಳೆದ ಸಂತೋಷ್ ಜೈನ್ ಅವರು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ಅಡುಗೆ ಗುತ್ತಿಗೆದಾರರಾಗಿ, ನಳಪಾಕ ತಜ್ಞರಾಗಿ ಗಮನ ಸೆಳೆದಿದ್ದಾರೆ.
 ಇದರ ಜೊತೆ ಜೊತೆಯಲ್ಲೆ ಅಣ್ಣ ಪ್ರಶಾಂತ ಅವರ ಜೊತೆ ಬೆಳ್ತಂಗಡಿ ನಗರದ ಮುಖ್ಯ ರಸ್ತೆಯಲ್ಲೆ ಜೈನ್ ರೆಸ್ಟೋರೆಂಟ್ ಎಂಬ ಹೊಟೆಲ್ ಉದ್ಯಮವನ್ನು ಪ್ರಾರಂಭಿಸಿ ಅಲ್ಪವರ್ಷದಲ್ಲೆ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ. 

ಈ ಹೊಟೆಲ್ ಆರಂಭವಾಗಿ ಹತ್ತಿರ ಹತ್ತಿರ 20 ವರ್ಷಗಳು ಸಂದರೂ ಅಂದಿನ ಕೆಲಸಗಾರರೆ ಈವರೇಗೂ ಅಲ್ಲಿ ಕೆಲಸ ಮಾಡುವುದು ನೋಡಿದರೇ ಸಂತೋಷ್ ಮತ್ತು ಪ್ರಶಾಂತ ಅವರುಗಳ ಪ್ರಾಂಜಲ ಮನಸ್ಸು ಮತ್ತು ಪ್ರೀತಿ ವಾತ್ಸಲ್ಯವೆ ಅದಕ್ಕೆ ಪ್ರಮುಖ ಕಾರಣ ಎನ್ನಲೇನು ಅಡ್ಡಿಯಿಲ್ಲ.

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂತೋಷ್ ಅವರ ಜೊತೆ ಸ್ವಲ್ಪ ಹೊತ್ತು ಕಳೆದರೇ ಸಾಕು, ಮನಸ್ಸಿನ ದುಖ: ದುಗುಡಗಳು ಮಾಯವಾಗುತ್ತದೆ. ಇನ್ನೊಬ್ಬರಿಗೆ ಅವರು ನೀಡುವ ಆತ್ಮಸ್ಥೈರ್ಯ ಮತ್ತು ಮಾರ್ಗದರ್ಶನ ಬಹಳಷ್ಟು ಜನರ ಬದುಕನ್ನು ಬದಲಾಯಿಸಿದೆ.

ಸದಾ ಹಸನ್ಮುಖಿಯಾಗಿರುವ ಶ್ರಮಜೀವಿ, ಪರೋಪಕಾರಿ ಗುಣಸಂಪನ್ನ ನನ್ನ ಜೀವ ಸ್ನೇಹಿತ ಸಂತೋಷ್ ಅವರಿಗೆ ಜನ್ಮದಿನದ ನಿಮಿತ್ತ ಮನದುಂಬಿದ ಶುಭಾಶಯಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಶುಭ ಪ್ರಾರ್ಥನೆಯೊಂದಿಗೆ,
 
ನಿಮ್ಮವ
ಸಂದೇಶ್.ಎಸ್.ಜೈನ್

 

Friday, June 5, 2020

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನ ವ್ಯವಸ್ಥೆ
ದಿನಾಂಕ 8-6-2020 ರಿಂದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ
 
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ದಿನಾಂಕ 8-6-2020 ರಿಂದ ಮಾಡಿಕೊಡಲಾಗುವುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳಶ್ರೀ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿರುತ್ತಾರೆ.
 
ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದಲ್ಲಿ, ಅನ್ನಪೂರ್ಣ ಭೋಜನ ಮಂದಿರದಲ್ಲಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. 

ದೇವಸ್ಥಾನದ ಒಳ ಪ್ರವೇಶ ಮಾಡುವವರು ತೆಗೆದುಕೊಳ್ಳಬೇಕಾದ ಕ್ರಮಗಳು ಇಂತಿವೆ. 

1. ಮುಖಕ್ಕೆ ಮಾಸ್ಕ್ ಧರಿಸಿರಬೇಕು
2. ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು
3. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು
4. ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು. 

ಅರ್ಚಕ ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು, ಸ್ವಯಂ ಸೇವಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಮರ್ಶಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. 

ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವರೇ ಕೋರಿದೆ. 
 
ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ. 
ಭಕ್ತಾದಿಗಳು ದೇವಸ್ಥಾನದ ಆಡಳಿತದ ಜೊತೆಯಲ್ಲಿ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Thursday, June 4, 2020

25 ವರ್ಷಗಳ ಸಾರ್ಥಕ ದಾಂಪತ್ಯ ಜೀವನಾನುಭವದ ಸಂತೃಪ್ತಿಯಲ್ಲಿ ನಮ್ಮ ದಿವಾಕರ ನಾಯ್ಕ ದಂಪತಿ
ವೈವಾಹಿಕ ಜೀವನದ 25 ವರ್ಷಗಳ ಸಂಭ್ರಮದಲ್ಲಿರುವ ಮಾನವೀಯ ಗುಣಧರ್ಮದ ಶ್ರೀ. ದಿವಾಕರ ನಾಯ್ಕ ಹಾಗೂ ದೀಪಾ ದಿವಾಕರ ನಾಯ್ಕ ದಂಪತಿಗಳಿಗೆ ಮನಪೂರ್ವಕ ಅಭಿವಂದನೆಗಳು.
 ತಾವು ಬದುಕುವುದರ ಜೊತೆಯಲ್ಲಿ ಇನ್ನೊಬ್ಬರ ಬದುಕಿಗೆ ನೆರಳಾಗುವ ಮೂಲಕ ಮಧುರ ಮನಸ್ಸಿನ ಮಾನವೀಯ ಜೋಡಿ ನಮ್ಮ ದಿವಾಕರ ನಾಯ್ಕರವರದ್ದು. ಅಹಂ ಇಲ್ಲವೆ ಇಲ್ಲ, ಕೋಪ ಅದಕ್ಕಿಂತ ಮೊದಲಿಲ್ಲ. ಇಂತಹ ಅಪರೂಪದ ಅಪೂರ್ವ ವ್ಯಕ್ತಿ ನಮ್ಮಣ್ಣ ದಿವಾಕರ ನಾಯ್ಕ ಅವರು. ದಿವಾಕರ ನಾಯ್ಕ ಅವರ ಕುಟುಂಬಕ್ಕೆ ಮುದ್ದಿನ ಹಾಗೂ ಮಮತಾಮಯಿ ಸೊಸೆಯಾಗಿ ಬಂದವರು ಸೌಭಾಗ್ಯ ಲಕ್ಷ್ಮೀಯ ರೂಪದಲ್ಲಿ ನನ್ನಕ್ಕ ದೀಪಾ ಅವರು. 
 ಮಾತೃ ಹೃದಯದ ದೀಪಾ ಅವರು ಪತಿಗೆ ದಾರಿದೀಪವಾಗಿದ್ದಾರೆ. ಮಕ್ಕಳಿಬ್ಬರಿಗೆ ಅಕ್ಕರೆಯ ಅಮ್ಮನಾಗಿ, ಅತ್ತೆ, ಮಾವನಿಗೆ ಅಭಿಮಾನದ ಮಗಳಂತಿರುವ ಸೊಸೆಯಾಗಿ, ಮೈದುನ ಹಾಗೂ ಮೈದುನನ ಪತ್ನಿಗೆ ಮಾರ್ಗದರ್ಶಕರಾಗಿ ಹಾಗೂ ನೆರೆಹೊರೆಯವರಿಗೆ ಮಮತೆಯ ಪರೋಪಕಾರಿ ಸಂಪನ್ನೆಯಾಗಿರುವ ದೀಪಾ ಅವರು ಮನೆಮಂದಿಯ ಮನಸ್ಸು ಗೆದ್ದು, ಊರಿನ ಜನರ ಪ್ರೀತಿ ವಾತ್ಸಲ್ಯಕ್ಕೂ ಪಾತ್ರರಾಗಿದ್ದಾರೆ.
 ಅನ್ಯೋನ್ಯ ಗುಣಸಂಸ್ಕೃತಿಯ ದಿವಾಕರ & ದೀಪಾ ದಂಪತಿಗಳ 25 ವರ್ಷಗಳ ವೈವಾಹಿಕ ಜೀವನದ ಸಂಭ್ರಮ, ಸಡಗರಕ್ಕೆ ನುಡಿರೂಪದ ಮೂಲಕ ಮನದಾಳದ ವಂದನೆ, ಅಭಿವಂದನೆಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

Tuesday, June 2, 2020

ಮಾನವೀಯ ಮೌಲ್ಯದ ಅನನ್ಯ ರತ್ನ - ನಮ್ಮ ಅಶುತೋಷ್ ರಾಯ್
ಪರೋಪಕಾರಿ ಗುಣಸಂಪನ್ನನಿಗೆ ಹುಟ್ಟು ಹಬ್ಬದ ಸಂಭ್ರಮ
ದಾಂಡೇಲಿ: ಎಲ್ಲಾದರೂ ಇರು, ಹೇಗಾದರೂ ಇರು, ಮೊದಲು ಭಾರತೀಯನಾಗಿರು. ಈ ದೇಶದ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿ ಉತ್ತರಪ್ರದೇಶದಿಂದ ದಾಂಡೇಲಿಗೆ ಬಂದ ಚಿಗುರು ಮೀಸೆಯ ತರುಣನೊಬ್ಬ ಅಪ್ಪಟ ದಾಂಡೇಲಿಗನಾಗಿ, ದಾಂಡೇಲಿ ಜನತೆಯ ಪ್ರೀತಿಗೆ ಪಾತ್ರರಾಗಿ, ಬೆವರು ಸುರಿಸಿ ಮೇಲೇರಿ ಬಂದ ಕಣ್ಮಣಿಯ ಜೀವನಗಾಥೆಯಿದು.
ಅಂದ ಹಾಗೆ ನಾನು ಬರೆಯಲು ಹೊರಟಿರುವುದು ಒಂದೆರಡು ಕನ್ನಡ ಶಬ್ದವನ್ನು ಮಾತನಾಡಿದರೂ, ಕನ್ನಡದ ನಾಡಿ ಮಿಡಿತವನ್ನು ಬಲ್ಲವರು ಹಾಗೂ ಕನ್ನಡದ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿರುವ ಯಶಸ್ವಿ ಉದ್ಯಮಿ, ಶ್ರೀ.ಗಜಾನನ ಟ್ರಾನ್ಸಪೋರ್ಟ್ ಇದರ ವ್ಯವಸ್ಥಾಪಕ ಪಾಲುದಾರ ಹಾಗೂ ಅದಕ್ಕಿಂತಲೂ ಮುಂದುವರಿದು ಹೇಳಬೇಕೆಂದರೇ ಸದಾ ನನ್ನ ಒಳಿತನ್ನು ಬಯಸುವ ಒಡಹುಟ್ಟಿದ ಅಣ್ಣನಿಗಿಂತಲೂ ಹೆಚ್ಚು ನನ್ನನ್ನು ಮುದ್ದಿಸುವ ನನ್ನ ಅಣ್ಣನಂತಿರುವ ಶ್ರೀ ಅಶುತೋಷ್ ರಾಯ್ ಅವರು ಇವತ್ತಿನ ನನ್ನ ಮುಖಪುಟದ ಕೇಂದ್ರ ಬಿಂದು.
 ಅವರ ಬಗ್ಗೆ ನನಗನಿಸಿದ್ದನ್ನು ಬರೆಯುವ ಮುಂಚೆ ಈ ದಿನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರಿಗೆ ಗೌರವಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಾ ಬರವಣಿಗೆಗೆ ಶುರುವಚ್ಚಿಕೊಳ್ಳುತ್ತೇನೆ.
ಭಾರತದ ಮಹತ್ವದ ಭೌಗೋಳಿಕ ಪ್ರದೇಶವಾದ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಶ್ರೀಮಂತ ಕುಟುಂಬದಲ್ಲೆ ಹುಟ್ಟಿದವರು ನಮ್ಮ ಅಶುತೋಷ್ ರಾಯ್ ಅವರು. ತಂದೆ ಫಲಕಧರಿ, ತಾಯಿ ಕಮಲಾ ರೈ. ಅಂದ ಹಾಗೆ ಇವರಬ್ಬರು ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ತಂದೆ ತಾಯಿ ಇಬ್ಬರು ಶಿಕ್ಷಕ ವೃತ್ತಿಯವರಂದ್ರೆ ಅವರ ಕುಟುಂಬದ ಜೀವನ ಸಂಸ್ಕಾರದ ಬಗ್ಗೆ ಹೆಚ್ಚೇನು ವಿವರಿಸಬೇಕಿಲ್ಲ. ಒಟ್ಟಿನಲ್ಲಿ ಸಂಪ್ರದಾಯಬದ್ದ ಹಾಗೂ ಶಿಸ್ತು ಬದ್ದ ಜೀವನ ಕ್ರಮ ಈ ಕುಟುಂಬದ್ದಾಗಿತ್ತು. ನಮ್ಮ ಅಶುತೋಷ್ ರಾಯ್ ಸಾಬಿಗೆ ನಾಲ್ವರು ಸಹೋದರಿಯರು, ಇಬ್ಬರು ಸಹೋದರರು. ತಂದೆ ತಾಯಿಯ ನೀತಿ ಪಾಠದಲ್ಲೆ ಬೆಳೆದ ಅಶುತೋಷ್ ರಾಯ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲೆ ಪಡೆದುಕೊಂಡರು. ಪ್ರೌಢಶಿಕ್ಷಣವನ್ನು ಜಗನ್ನಾರಾಯಣ ಇಂಟರ್ ಸ್ಕೂಲಿನಲ್ಲಿ ಉನ್ನತ ಅಂಕಗಳೊಂದಿಗೆ ಪಡೆದ ಅವರು ಮಹಮ್ಮದಾಬಾದ್ ಇಂಟರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಮುಂದೆ ತಂದೆ, ತಾಯಿಯಂತೆ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದವರಿಗೆ ಯಾಕೋ ಏನೋ, ಇದೆಲ್ಲಾ ಬೇಡ, ಏನಾದರೂ ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಯಾರ ಹಂಗಿಲ್ಲದೇ ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಸಂಕಲ್ಪವನ್ನು ತೊಟ್ಟು, ಅವರಿವರ ಪರಿಚಯದ ಮೂಲಕ ಉತ್ತರ ಪ್ರದೇಶದಿಂದ ಮುಖ ತಿರುಗಿಸಿದ್ದು, ಮಿನಿ ಇಂಡಿಯಾ ಎಂದೆ ಜನಜನಿತವಾದ ನಮ್ಮ ಹೆಮ್ಮೆಯ ದಾಂಡೇಲಿಗೆ ಎಂಬುವುದನ್ನು ನಾನಂತು ಖುಷಿಯಿಂದಲೆ ಹೇಳ ಬಯಸುತ್ತೇನೆ.
 1999 ರಂದು ದಾಂಡೇಲಿಗೆ ಬಂದವರು ಸ್ವಲ್ಪ ದಿನ ಅಲ್ಲಿ ಇಲ್ಲಿ ಕೆಲಸ ಮಾಡಿ, ಊರಿನ ಹಾಗೂ ವ್ಯವಹಾರದ ಸಮಗ್ರ ಮಾಹಿತಿಯನ್ನು ಅರೆದು ಕುಡಿದ ಅಶುತೋಷ್ ರಾಯ್ ಅವರು ಆನಂತರದ ದಿನಗಳಲ್ಲಿ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಎಂಬ ಸಾರಿಗೆ ಉದ್ಯಮವನ್ನು ಪ್ರಾರಂಭಿಸಿದರು. ಇದಕ್ಕೆ ಅವರ ಗೆಳೆಯ ಪ್ರಕಾಶ ವಾಜ್ವೆ ಅವರು ಸಂಗಾತಿಯಾದರು. ಇಲ್ಲಿಂದ ಆರಂಭಗೊಂಡ ಅವರ ನೈಜಜೀವನ ಯಾತ್ರೆ ಶುಭಫಲದೊಂದಿಗೆ ಯಶಸ್ಸಿನೆಡೆಗೆ ಹೆಜ್ಜೆಯಿಟ್ಟಿದೆ. ಇವತ್ತು ದಾಂಡೇಲಿಯಲ್ಲಿ ಖ್ಯಾತ ಸಾರಿಗೆ ಉದ್ಯಮವಾಗಿ ಅಶುತೋಷ್ ರಾಯ್ ಅವರ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಗಮನ ಸೆಳೆಯುತ್ತಿದೆ.
ಪರೋಪಕಾರಿ ಸಂಪನ್ನ:
ನಾನವರನ್ನು ಯಾಕೆ ಮೆಚ್ಚಿಕೊಂಡೆ, ಅವರನ್ನಾಕೆ ನಂಬಿಕೊಂಡೆ ಎನ್ನುವುದೆ ಆಶ್ವರ್ಯ. ಅವರ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಕಚೇರಿ ಪಕ್ಕದಲ್ಲೆ ನನ್ನ ಸಪ್ತಸಾರ ಪತ್ರಿಕೆಯ ಕಾರ್ಯಾಲಯವನ್ನು ಪ್ರಾರಂಭಿಸಿದ್ದೆ. ಇದು 2011 ರಲ್ಲಿ ಎಂದು ವಿವರಿಸಬೇಕಿಲ್ಲ. ಅಂದು ಆದ ಪರಿಚಯ ಅದು ವರ್ಣಿಸಲು ಅಸಾಧ್ಯವಾದ ಸಂಬಂಧವನ್ನು ಗಟ್ಟಿಗೊಳಿಸಿತು. ನನಗೆ ಸರಿಯಾಗಿ ಹಿಂದಿ ಮಾತನಾಡಲು ಆಗದು, ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಆಗದು. ಆದರೂ ದೇಹಭಾಷೆಯ ಮೂಲಕ ನನ್ನ ಅವರ ಮಾತುಗಳು ನನಗೆ ಹಾಗೂ ಅವರಿಗೆ ಅರ್ಥವಾಗುತ್ತಿತ್ತು. ಕೊನೆ ಕೊನೆಗೆ ನನ್ನದು ಕನ್ನಡ ಮಿಶ್ರಿತ ಹಿಂದಿ ಭಾಷೆ, ಅವರದ್ದು ಹಿಂದಿ ಮಿಶ್ರಿತ ಕನ್ನಡ ಭಾಷೆ. ಒಟ್ಟಿನಲ್ಲಿ ಇಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಸಂಭಾಷಣೆ. ನನಗೆ ಪರಿಚಯವಾಗಿ ಕೇವಲ ಆರೇ ತಿಂಗಳಲ್ಲಿ ನನ್ನ ಸಪ್ತಸಾರ ಪತ್ರಿಕೆಗೆ ಬಹುದೊಡ್ಡ ಆರ್ಥಿಕ ಸಹಾಯ ಮಾಡಿರುವುದನ್ನು ನಾನ್ಯಾವತ್ತು ಮರೆಯಲಾರೆ. ಆದರೆ ನನ್ನ ದುರದೃಷ್ಟವಾಶತ್ ಪತ್ರಿಕೆ ಸ್ಥಗಿತಗೊಂಡಿತು. ನನ್ನ ಪತ್ರಿಕಾ ಕಾರ್ಯಾಲಯ ಬಂದ್ ಮಾಡಿ ಬಾಗಿಲು ಹಾಕಿ, ಚಾವಿಯನ್ನು ಕಟ್ಟಡ ಮಾಲೀಕರಿಗೆ ಕೊಡುವ ಮುಂಚೆ ನನ್ನ ಪರಿಶ್ರಮ ವ್ಯರ್ಥವಾಗಿರುವುದನ್ನು ಗಮನಿಸಿ ಆಶುತೋಷ್ ರಾಯ್ ಅವರು ಕಣ್ಣಲ್ಲಿ ನೀರು ಹರಿಸಿ, ನನಗೆ ಧೈರ್ಯ ನೀಡಿದ್ದನ್ನು ನಾನೆಂದು ಮರೆಯಲಾರೆ. ನಾನು ಎಲ್ಲಿಯವನೋ, ಅವರು ಎಲ್ಲಿಯವರೋ, ಆದ್ರೆ ನನ್ನನ್ನು ಅವರು ಪ್ರೀತಿಸಿದ, ಮುದ್ದಿಸಿದ, ಪ್ರೋತ್ಸಾಹಿಸಿದ ಮತ್ತು ಪ್ರೋತ್ಸಾಹಿಸುತ್ತಿರುವ ರೀತಿ ಒಡಹುಟ್ಟಿದ ಅಣ್ಣನು ಮಾಡಲು ಅಸಾಧ್ಯ ಎಂಬುವುದನ್ನು ಎದೆ ಮುಟ್ಟಿ ಹೇಳಬಯಸುತ್ತೇನೆ.
ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ನನ್ನ ಬಗ್ಗೆನೆ ಬಹಳ ಬರೆದೆ ಎಂದು ಯಾರು ಅಂದ್ಕೋಬೇಡಿ. ಯಾಕೆಂದ್ರೆ ನಾನವರನ್ನು ಅತ್ಯಂತ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆ ಕಾರಣಕ್ಕಾಗಿಯೆ ಅವರ ಬಳಿ ದಿನಕ್ಕೆ ಒಂದು ಐದು ನಿಮಿಷವಾದರೂ ಹರಟೆ ಹೊಡೆಯುತ್ತೇನೆ. ಚರ್ಚೆ ಮಾಡುತ್ತೇನೆ. ನನಗೆ ಯಾವುದೇ ಕಷ್ಟವಿದ್ದರೂ ಅವರ ಬಳಿ ಹೇಳಿದರೇ ತಕ್ಷಣ ನನ್ನ ಸಮಸ್ಯೆ ಬಗೆಹರಿಸುವ ಅವರ ಮಮಕಾರದ ಮನಸ್ಸಿಗೆ ಬೆಲೆ ಕಟ್ಟಲು ಅಸಾಧ್ಯ.
ಹೌದು ಅವರು ಪರೋಪಕಾರಿ ಸಂಪನ್ನ ಎಂದೆ ಹೇಳುತ್ತೇನೆ. ಯಾರೇ ಅವರ ಬಳಿ ಕಣ್ಣೀರು ಹಾಕಿ ಬಂದರೇ ಅವರ ಕಣ್ಣೀರನ್ನು ಒರೆಸುವ ಕರುಣಾಮಯಿ. ಸಂಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ ಮಾಡುವ ಅವರ ಸೇವಾಗುಣವೆ ಅವರ ವ್ಯಕ್ತಿತ್ವದ ಪ್ರಮುಖ ಹೈಲೈಟ್. ನನಗೊತ್ತು, ನನ್ನ ಗೆಳೆಯನೊಬ್ಬನ ಸಂಬಂಧಿ ಕಾರವಾರದ ನಿವಾಸಿ, ಜೀವನ್ಮರಣ ಹೋರಾಟದಲ್ಲಿದ್ದ ವಿಚಾರ ತಿಳಿದ ಅಶುತೋಷ್ ರಾಯ್ ಅವರು ಕೂಡಲೆ ಆರ್ಥಿಕ ಸಹಾಯ ಮಾಡಿ ಗಮನ ಸೆಳೆದಿದ್ದರು.
ನಗರ ಹಾಗೂ ನಗರದ ಸುತ್ತಮುತ್ತಲು ನಡೆಯುವ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ, ಪೂಜೆ, ಜಾತ್ರೋತ್ಸವಗಳಿಗೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನು ಮನ ಧನದ ಸಹಾಯ ಮಾಡುವ ಅಶುತೋಷ್ ರಾಯ್ ಅವರು ನಮ್ಮ ಗಾಂಧಿನಗರದ ಶ್ರೀ ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಮಾರ್ಗದರ್ಶಕರಾಗಿಯೂ ನಮ್ಮ ಕಾರ್ಯಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುವ ಅಶುತೋಷ್ ರಾಯ್ ಅವರು ತನ್ನ ಸಾಮಾಜಿಕ ಸೇವಾ ಕೈಂಕರ್ಯಗಳಿಂದ ದಾಂಡೇಲಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದಾರೆ. ತನ್ನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ತಮ್ಮಂದಿರರಂತೆ ಪ್ರೀತಿಸುವ ಅವರ ಹೃದಯವೈಶ್ಯಾಲ್ಯತೆ ಶ್ಲಾಘನೀಯ.
 ಹ್ಯಾಟ್ರಿಕ್ ಖಜಾಂಚಿಯಾದ ನಮ್ಮ ರಾಯ್:
ದಾಂಡೇಲಿಯ ರೋಟರಿ ಕ್ಲಬಿನ ಸದಸ್ಯರಾಗಿ, ರೋಟರಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಅಶುತೋಷ್ ರಾಯ್ ಅವರು ರೋಟರಿ ಕ್ಲಬಿನಲ್ಲಿ ಹ್ಯಾಟ್ರಕ್ ಖಜಾಂಚಿಯಾಗಿ ಗಮನಾರ್ಹ ಸಾಧನೆಗೈದಿದ್ದಾರೆ. ಮತ್ತೇ ನಾಲ್ಕನೇ ಬಾರಿಯೂ ಅನಾಯಸವಾಗಿ ಇದೇ ಹುದ್ದೆ ಅವರಿಗೆ ಒಲಿದುಬರಲಿದೆ. ರೋಟರಿ ಕ್ಲಬಿನ ರಾಜೇಶ ವೇರ್ಣೇಕರ, ಗಣೇಶ ಕಾಮತ್ ಅವರ ಜೊತೆಗೂಡಿ ತನ್ನ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಸಹಭಾಗಿತ್ವದಲ್ಲಿ ನಗರದ ಸಂಡೆ ಮಾರ್ಕೆಟ್ ಬಳಿ ಬಸ್ ಶೆಲ್ಟರನ್ನು ನಿರ್ಮಿಸಿಕೊಟ್ಟಿರುವುದನ್ನು ಇಲ್ಲಿ ಉಲ್ಲೇಖಿಸಲೆಬೇಕು. ರೋಟರಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೂ ತನು,ಮನ,ಧನದ ಸಹಾಯವನ್ನು ನೀಡಿದ ಹೆಗ್ಗಳಿಕೆ ರಾಯ್ ಅವರಿಗಿದೆ. ರೋಟರಿ ಕ್ಲಬಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ರೋಟರಿ ಕ್ಲಬಿನ ಕುಬೇರ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ.
ನಗರದ ಟ್ರಕ್ ಟ್ರಾನ್ಸಪೋರ್ಟ್ ಅಸೋಶಿಯೇಶನ್ ಇದರ ಪ್ರಮುಖ ಪದಾಧಿಕಾರಿಯಾಗಿರುವ ಅಶುತೋಷ್ ರಾಯ್ ಅವರು ನಗರದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆವರು ಸುರಿಸಿ, ರಾತ್ರಿ ಹಗಲೆನ್ನದೇ ದುಡಿದು, ಎಲ್ಲರ ಪ್ರೀತ್ಯಾದಾರಗಳ ಜೊತೆಗೆ ಸ್ವಂತ ಮನೆ, ಸ್ವಂತ ಕಟ್ಟಡದಲ್ಲೆ ಕಚೇರಿ ಪ್ರಾರಂಭಿಸುವ ತನ್ನ ಬಹುಕಾಲದ ಕನಸು ನನಸು ಮಾಡಿಕೊಂಡ ಧನ್ಯತೆ ಅವರಿಗಿದೆ.

ಎಲ್ಲರೊಂದಿಗೆ ಎಲ್ಲರಂತಿರುವ ಸ್ನೇಹಮಯಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ನಗುಮೊಗದ ಸಹೋದರ ಅಶುತೋಷ್ ರಾಯ್ ಅವರ ಜೀವನಸಾಧನೆಗೆ ತಂದೆ ತಾಯಿಯವರ ಆಶೀರ್ವಾದ, ಸಹೋದರರ ಹಾಗೂ ಸಹೋದರಿಯರುಗಳ ಪ್ರೋತ್ಸಾಹ, ಮಡದಿ ಗ್ಯಾಂತಿ ಯವರ ಮನದುಂಬಿದ ಪ್ರೀತಿ ಸಹಕಾರ, ಅವರರೆಡು ಕಣ್ಣುಗಳಾದ ಅನಿಕೇತ್ ಮತ್ತು ಆದಿತ್ಯಾ ಅವರುಗಳ ಆತ್ಮೀಯ ಪ್ರೀತಿ, ವಾತ್ಸಲ್ಯವೆ ಪ್ರಮುಖ ಕಾರಣ.
ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನನ್ನ ಅಣ್ಣಯ್ಯ ಅಶುತೋಷ್ ರಾಯ್ ಅವರಿಗೆ ಭಗವಂತ ಆಯುರಾರೋಗ್ಯ, ಸುಖ-ಸಂಪತ್ತನ್ನು ಕರುಣಿಸಲಿ, ಮನೆ ಮತ್ತು ಮನದಲ್ಲಿ ಸದಾ ನಗು ತುಂಬಿರಲಿ ಎಂಬ ಪ್ರಾರ್ಥನೆಯೊಂದಿಗೆ, ಹೃದಯಪೂರ್ವಕ ಶುಭಾಶಯಗಳು ರಾಯ್ ಸಾಬ್.
ನಿಮ್ಮವ
ಸಂದೇಶ್.ಎಸ್.ಜೈನ್

Saturday, April 25, 2020

ಇಂದು ನನ್ನ 8 ನೇ ವರ್ಷದ ವಿವಾಹ ವಾರ್ಷಿಕೋತ್ಸವ
ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ವರ್ಷಗಳು ಸಂದಿವೆ. ಕಳೆದ 8 ವರ್ಷಗಳಿಂದಲೂ ನನ್ನನ್ನು ಪ್ರತಿಸಲ ಪ್ರತಿಕ್ಷಣ ಸಹಿಸಿಕೊಂಡು ಉದ್ದರಿಸಿ ಮುನ್ನಡೆಸುತ್ತಿರುವ ನನ್ನ ಜೀವನದ ಭಾಗ್ಯದ ಬೆಳಕಾದ ಕೈ ಹಿಡಿದ ಮಡದಿ ಪದ್ಮಶ್ರೀಗೆ ನಮ್ರ ಕೃತಜ್ಞತೆಗಳು. ನನ್ನ ಅಪ್ಪ, ಅಮ್ಮನಿಗೆ ಹ್ಮೆಮಯ ಸೊಸೆಯಾಗಿ, ಅತ್ತೆ ಮಾವನಿಗೆ ಪ್ರೀತಿಯ ಮಗಳಾಗಿ, ನನ್ನ ಹೃದಯವಾದ ಮಗ ಸುಯೋಗನಿಗೆ ಅಕ್ಕರೆಯ ಅಮ್ಮನಾಗಿ, ನನ್ನ ಸಂಸಾರದೊಡತಿಯಾಗಿರುವ ಪದ್ಮಶ್ರೀ ನಿನಗಿದೊ ಮಗದೊಮ್ಮೆ ಥ್ಯಾಂಕ್ಸ್. ನನ್ನನ್ನು ವರಿಸಿ, ನನ್ನನ್ನು ಸಹಿಸಿ ಸಲಹುತ್ತಿರುವ ಪದ್ಮಶ್ರೀ ನಿನ್ನ ಪ್ರಾಂಜಲ ಹೃದಯದ ಮನಸ್ಸಿಗೆ ನಾನು ಏನು ಹೇಳಿದರೂ ಕಡಿಮೆನೆ. ನನ್ನ ಸಾವಿರ ತಪ್ಪುಗಳನ್ನು ಮನ್ನಿಸಿ, ಮುನ್ನಡೆಸುವ ನಿನಗೆ ಇಂದು ನನ್ನಿಂದಾಗಿರುವ ತಪ್ಪುಗಳಿಗೆ ಸ್ವಾರಿ ಹೇಳುತ್ತೇನೆ.

ಐ ಲೈವ್ ಯೂ, ಪದ್ಮಶ್ರೀ, ಐ ಲವ್ ಯೂ

ಎಂದೆಂದೂ ನಿನ್ನವನೆ,
ಸಂದೇಶ್.ಎಸ್.ಜೈನ್

Thursday, April 23, 2020

 ಜೀವನದಲ್ಲಿ ಬ್ರೇಕ್ ಡೌನ್ ಎದುರಿಸುತ್ತಿರುವ ಬ್ರೇಕಿಂಗ್ ಸುದ್ದಿ ಕೊಡುವ ತಾಲೂಕು ಮಟ್ಟದ ವರದಿಗಾರರು

ಅಭದ್ರತೆಯಲ್ಲಿರುವ ವರದಿಗಾರರುಗಳಿಗೆ ಸರಕಾರದಿಂದ ಜೀವನ ಭದ್ರತೆ ಸಿಗಬಹುದೆ?

ಬರಹ: ಸಂದೇಶ್.ಎಸ್.ಜೈನ್, ದಾಂಡೇಲಿ
ವರದಿಗಾರರು,
ವಿಜಯನಗರ, ದಾಂಡೇಲಿ-581325
ಉತ್ತರಕನ್ನಡ ಜಿಲ್ಲೆ, ಕರ್ನಾಟಕ.
ಮೊ:9620595555, 7349443043
Email: sandesh.kanyady55@gmail.com
blog: sandeshnewspage.blogspot.com

ದಾಂಡೇಲಿ : ಅವನ ಮನೆಯಲ್ಲಿ ಹೆಂಡತಿ ಅಥವಾ ಅಮ್ಮ ಅನಾರೋಗ್ಯಗೊಂಡಿದ್ದರೂ, ಆರ್ಥಿಕ ಆಡಚಣೆಯಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಯಾತನೆಯ ಸ್ಥಿತಿ. ಅದೇ ಸಂದರ್ಭದಲ್ಲಿ ಇಲ್ಲೊಬ್ಬ ಬಡವ ಕ್ಯಾನ್ಸರ್ ಪೀಡಿತನಾಗಿದ್ದು, ಅವನು ಬದುಕುಳಿಯಬೇಕಾದರೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು ಹಣದ ತೊಂದರೆಯಿದೆ,  ದಯವಿಟ್ಟು ದಾನಿಗಳ ನೆರವಿಗಾಗಿ ಸುದ್ದಿ ಮಾಡುವಿರ ಎಂದು ಮೊಬೈಲ್ ಕರೆ ಬಂದು ಮಾತಾಡಿಟ್ಟ ತಕ್ಷಣವೆ  ಬೈಕನ್ನೇರಿ ಅನಾರೋಗ್ಯ ಪೀಡಿತನಲ್ಲಿಗೆ ಭೇಟಿ ಕೊಟ್ಟು, ಅವನ ಮಾಹಿತಿ ಪಡೆದು ಶಸ್ತ್ರಚಿಕಿತ್ಸೆಗೆ ಸಹಾಯವನ್ನು ಯಾಚಿಸುವ ವರದಿ ಮಾಡಿ ಆತ ಬದುಕುವಂತಾಗಲೂ ಒದ್ದಾಡುವ ತಾಲೂಕು ಮಟ್ಟದ ವರದಿಗಾರರು ಬಿದ್ದಾಗ ಅವರನ್ನು ಎಬ್ಬಿಸುವವರು ಯಾರು? ಎಂಬ ಪ್ರಶ್ನೆ ಎಲ್ಲ ತಾಲೂಕು ಮಟ್ಟದ ಪತ್ರಕರ್ತರದ್ದಾಗಿದೆ.

ಹೌದು ಸ್ನೇಹಿತರೇ, ಮಹಾಮಾರಿ ಕೊರೊನಾದಿಂದ ಭಾರತ ಲಾಕ್ ಡೌನ್ ಆಗಿದೆ. ಆದರೆ ತಾಲೂಕು ಮಟ್ಟದ ವರದಿಗಾರರ ಜೀವನ ಮಾತ್ರ ಸದಾ ಬ್ರೇಕ್ ಡೌನ್ ನಲ್ಲಿರುವುದು ದುರ್ದೈವ್ಯ. ಈಗ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳು, ಜನಪ್ರತಿನಿಧಿಗಳು ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಆಹಾರ ವಸ್ತುಗಳನ್ನು ದಾನ ಮಾಡುತ್ತಾರೆ. ಸುದ್ದಿಗಾಗಿ ನಾವು ಹೋಗುತ್ತೇವೆ. ಪೋಟೊ ಕ್ಲಿಕ್ಕಿಸಿ ಬಂದು ಸುದ್ದಿ ಮಾಡುತ್ತೇವೆ. ಯಾವ ಬಡವರಿಗೆ ಅಕ್ಕಿ, ಬೆಳೆ ಕೊಡಲಾಗುವ ಸುದ್ದಿ ಮಾಡುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರ ಮನೆಯಲ್ಲಿ ಬೆಳೆ-ಕಾಳುಗಳ ಡಬ್ಬ ಖಾಲಿಯಾಗಿದ್ದು ಗೊತ್ತಿದ್ದರೂ ಮಾನ ಮರ್ಯಾದಿಗಂಜಿ ಆ ದಾನಿಗಳ ಬಳಿ ಕೈ ಚಾಚುವುದಿಲ್ಲ. ಇತ್ತ ದಾನಿಗೂ ವರದಿಗಾರರಿಗೆ ಕೊಡಲು ಸರಿಯಾಗುತ್ತೆಯೇ ಎಂಬ ಸಂಕೋಚ. ಈ ಸಂಕೋಚಗಳ ಮಧ್ಯೆ ದಿನ ನಿತ್ಯ ಇನ್ನೊಬ್ಬರ ಬದುಕಿಗೆ ಆಸರೆಯಾಗುವ ವರದಿಗಾರನಿಗೆ ಮಾನಸಿಕ ಬೇಸರವೆ ಬಹುದೊಡ್ಡ ಆಸ್ತಿ.

ತಾಲೂಕು ಮಟ್ಟದ ವರದಿಗಾರರಾದ ನಾವೆ ಅಲ್ಲಿ ಬಡವರು ಇದ್ದಾರೆ, ಇಲ್ಲಿ ಸಂಕಷ್ಟದಲ್ಲಿದ್ದಾರೆ ಎಂದು ಅವರಿವರಿಗೆ ಅವರಿವರು ದಾನಿಗಳಿಂದ ದಾನ ಮಾಡಿಸುವ ಸೇತುವೆಗಳಾಗುತ್ತೇವೆ. ನಾವು ಇನ್ನೊಬ್ಬರ ಬದುಕಿಗೆ ಸಹಾಯದ ಸೇತುವೆಯಾಗುತ್ತೇವೆ. ಆದರೆ ನಮ್ಮ ಮನೆಯ ಸಂಕಷ್ಟಕ್ಕೆ ಸೇತುವೆಯಾಗುವವರು ಯಾರು ಎಂಬ ಪ್ರಶ್ನೆ ಸಹಜವಾಗಿಯೆ ಕಾಡುತ್ತಿದೆ. ಸಮಾಜದಲ್ಲಿ ಗೌರವಯುತವಾದ ಸ್ಥಾನವಿರುವುದರಿಂದ ಅತ್ತ ಆ ವರದಿಗಾರನಿಗೆ ದಾನಿಗಳ ಬಳಿ ಕೈ ಚಾಚಲು ಆಗದು, ಇತ್ತ ಕೊಡುವ ದಾನಿಗೂ ಹೇಗೆ ಕೊಡಲಿ ಎಂಬ ಚಿಂತೆ ಮತ್ತು ಬಡವನಲ್ಲದಿರಬಹುದೆಂಬ ಹಾಗೂ ಕಷ್ಟದಲ್ಲಿರಲಿಕ್ಕಿಲ್ಲ ಎಂಬ ಅಭಿಪ್ರಾಯವಿರುವುದು ಸಹ ಇನ್ನೊಂದೆಡೆ ಎನ್ನುವುದನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲ.

ಸುದ್ದಿಗಾಗಿ ಅಲ್ಲಿ ಇಲ್ಲಿ ಎಂದು ಸಾಕಷ್ಟು ಕಡೆ ಓಡಾಡುತ್ತಿರುತ್ತೇವೆ. ಸುದ್ದಿ ಯಾರ್ದಾದರೂ ನಮ್ಮ ಬೈಕಿಗೆ ಹಾಕುವ ಪೆಟ್ರೋಲ್ ಮಾತ್ರ ನಮ್ಮದೆ ಎನ್ನುವುದು ಸತ್ಯ. ಅದು ಒಂದೊಂದು ಸಲ ಪೆಟ್ರೋಲ್ ಹಾಕಲು ಹಣವಿಲ್ಲದೆ ಕಿಸೆಯಲ್ಲಿ ಕೇವಲ 20 ರೂ ವಿರುವಾಗಲೆ ಪೆಟ್ರೋಲ್ ಖಾಲಿಯಾದರೇ ಪೆಟ್ರೋಲ್ ಪಂಪಿನಲ್ಲಿ ಕನಿಷ್ಟ ಮೊತ್ತದ ಪೆಟ್ರೋಲ್ ಹಾಕಲು ಮುಜುಗರ. ಜನದಟ್ಟನೆ ಖಾಲಿಯಾದ ನಂತರ ಗಡಿಬಿಡಿ ಎಂಬಂತೆ ನಾಟಕವಾಡಿ ಅಂತೂ ಕೊನೆಗೆ 20 ರೂ ಪೆಟ್ರೋಲ್ ಹಾಕೊಂಡು ಹೋಗುವಂತಹ ಸ್ಥಿತಿ ತಾಲೂಕು ಮಟ್ಟದ ವರದಿಗಾರರದ್ದಾಗಿದೆ.
ಬದುಕು ಬರ್ಬದ್-ಆದರೆ ಸುದ್ದಿ ಮಾತ್ರ ಜಬರ್ದಸ್ತ್
ತಾಲೂಕು ಮಟ್ಟದ ವರದಿಗಾರರ ಬದುಕು ಬರ್ಬದಾದರೂ ಸುದ್ದಿ ಮಾತ್ರ ಜಬರ್ದಸ್ತ್ ಎನ್ನುವುದು ಎಲ್ಲರು ಒಪ್ಪಿಕೊಳ್ಳಲೆಬೇಕು. ಒಂದು ಊರಿನ ಅಭಿವೃದ್ಧಿಯಲ್ಲಿ ಆ ಊರಿನ ಪತ್ರಿಕಾ ವರದಿಗಾರರ ಪಾತ್ರ ಬಹಳ ಮುಖ್ಯವಾಗಿದೆ. ಕೇವಲ ಒಂದು ಪೆನ್ನಿನಿಂದ ಅದೇಷ್ಟೋ ಊರಿನ ರಸ್ತೆಗಳು, ಗಟಾರಗಳು, ಶಾಲೆಗಳು ಹೀಗೆ ಸಾರ್ವಜನಿಕ ಕೆಲಸ ಕಾರ್ಯಗಳು ಆಗಿವೆ. ಕೆಲಸ ಮಾಡದ ಜನಪ್ರತಿನಿಧಿಗಳಿಂದ ಇದೇ ವರದಿಗಾರರು ತಮ್ಮ ಹರಿತವಾದ ವರದಿಗಳ ಮೂಲಕ ಕೆಲಸ ಮಾಡಿಸುತ್ತಿರುವುದು ಗೊತ್ತಿರುವ ಸಂಗತಿ. ಇನ್ನೂ ಅವರಿರವರು ಕರೆದಾಗ ಸುದ್ದಿಗೋಷ್ಟಿಗೆ ಹೋಗಿ ಸುಮಾರು ಒಂದೆರೆಡು ಗಂಟೆಗಳವರೆಗೆ ಸುದ್ದಿಗೋಷ್ಟಿಯಲ್ಲಿ ಕುಳಿತು ಅವರು ಹೇಳಿದ್ದನ್ನೆಲ್ಲ ಬರೆದು ಸುದ್ದಿ ಮಾಡುತ್ತೇವೆ. ಆ ಸುದ್ದಿ ಗೋಷ್ಟಿಗೆ ಹೋಗಲು ಪೆಟ್ರೋಲಿಗೆ ಸಾಕಾಗುವಷ್ಟು ಸುದ್ದಿಗೆ ಹಣ ಬರುತ್ತದೆ. ಆದರೆ ನಮ್ಮ ಶ್ರಮದ ಆದಾಯ ಸೊನ್ನೆ ಎನ್ನಲು ಅಡ್ಡಿಯಿಲ್ಲ.

ಇವತ್ತು ರಾಜ್ಯದ ಟಿವಿ ಚಾನೆಲ್ಗಳಲ್ಲಿ ಬ್ರೇಕಿಂಗ್ ಆಗುವ ಬಹುತೇಕ ಸುದ್ದಿಗಳು ನಮ್ಮದೆ. ಆದರೆ ಆ ಸುದ್ದಿ ನಮ್ಮೆದೆಂದು ಹೇಳಲು ಮತ್ತು ಅದಕ್ಕೆ ಸಂಭಾವನೆ ಪಡೆಯಲು ನಮಗೆ ಹಕ್ಕಿಲ್ಲ ಎನ್ನುವುದು ವಾಸ್ತವ ಸತ್ಯ. ಟಿವಿ ನ್ಯೂಸ್ ಚಾನೆಲುಗಳಿಗೆ ಜಿಲ್ಲೆಗೊಬ್ಬರೆ ವರದಿಗಾರರು ಇರುವುದರಿಂದ ಅವರಿಗೆ ಮಿಕ್ಕೆಲ್ಲ ತಾಲೂಕುಗಳ ಸುದ್ದಿ ಮೊಬೈಲುಗಳ ಮೂಲಕ ಮುಟ್ಟಿಸುವವರು ನಮ್ಮಂತಹ ತಾಲೂಕು ವರದಿಗಾರರುಗಳು ಎನ್ನುವುದು ಎಲ್ಲರಿಗೂ ತಿಳಿದಿರಲಿ. ಆದರೆ ಅವರು ಬ್ರೇಕಿಂಗ್ ಕೊಟ್ಟು ಅದರ ಮಹತ್ವ ಕಳೆದುಹೊದ ಮರುದಿನ ನಮ್ಮ ಸುದ್ದಿಗಳು ಬಂದು ಬಿಡ್ತಾವೆ. ಇನ್ನು ಒಂದು ಮಾತು ಹೇಳಬೇಕೆಂದರೇ ಅದೇಷ್ಟೊ ನಮ್ಮ ಸುದ್ದಿಗಳೆ ಅಮಾಯಕರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಕೊಡಿಸುವಲ್ಲಿ ಸಾಕ್ಷಿಯ ರೂಪದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸರಕಾರದ ಗುಪ್ತಚಾರ ಇಲಾಖೆಯು ನೇರವಾಗಿ ಒಪ್ಪಿಕೊಳ್ಳಲಾಗದಿದ್ದರೂ ಅವರು ಸಹ ಹೆಚ್ಚಾನು ಹೆಚ್ಚು ತಾಲೂಕು ಮಟ್ಟದ ವರದಿಗಾರರ ಜೊತೆ ಹೆಚ್ಚಿನ ಓಡನಾಟವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಅಗತ್ಯದ ಮಾಹಿತಿಯನ್ನು ನಮ್ಮಿಂದಲೆ ಪಡೆದುಕೊಳ್ಳುತ್ತಾರೆ.

ಸರಕಾರದ ಯಾವುದೇ ಯೋಜನೆಗಳು ಫಲಪ್ರದಾಯಕವಾಗಲು ತಾಲೂಕು ಮಟ್ಟದ ವರದಿಗಾರರುಗಳ ಪರಿಣಾಮಕಾರಿ ವರದಿಗಳು ಮಹತ್ವಪೂರ್ಣವಾಗಿವೆ. ಹಳ್ಳಿಯಿಂದ ದಿಲ್ಲಿಯವರೆಗೆ ಬದಲಾವಣೆ ತರಬಲ್ಲ ತಾಕತ್ತು ಹೊಂದಿರುವ ತಾಲೂಕು ಮಟ್ಟದ ಅದೇಷ್ಟೊ ವರದಿಗಾರರಿಗೆ ಸಂಸಾರ ನಿರ್ವಹಿಸುವ ತಾಕತ್ತು ಇಲ್ಲದಿರುವುದು ಮಾತ್ರ ದುರಂತ.
ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಎಲ್ಲವೂ ಉಂಟು-ನಮಗೆ ಮಾತ್ರ ಸಂಕಟ ಸದಾ ಉಂಟು
ಸರಕಾರದ ಹಲವಾರು ಯೋಜನೆಗಳು ಕೈ ತುಂಬ ವೇತನ ಪಡೆಯುವ ಜೀವನ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ಸೀಮಿತವಾಗುತ್ತಿದೆ. ತಾಲೂಕು ಮಟ್ಟದ ವರದಿಗಾರರು ತನ್ನ ಪಾಡಿಗೆ ತಾನಿದ್ದರೇ ಟಿವಿಯವರು ಬ್ರೇಕಿಂಗ್ ಸುದ್ದಿ ಕೊಡುವುದಾದರು ಹೇಗೆ?. ಕ್ರೈಂ ಸ್ಟೋರಿಗೆ ಸುದ್ದಿಯ ಜಾಡನ್ನು ಹಿಡಿಯಲು ಟಿ.ವಿ ವರದಿಗಾರರಿಗೆ ಆಯಾಯ ತಾಲೂಕಿನ ವರದಿಗಾರರುಗಳ ಸಹಾಯ ಬೇಕೆ ಬೇಕು.  ಸರಕಾರದ ಹಲವಾರು ಯೋಜನೆಗಳು ಕೈ ತುಂಬ ಸಂಬಳ ಪಡೆಯುವ ಭದ್ರತೆಯಿರುವ ಪತ್ರಕರ್ತರಿಗೆ ಮಾತ್ರ ದಕ್ಕುತ್ತವೆ. ಅಭದ್ರತೆಯಲ್ಲಿರುವ ನಮಗೆ ಏನು ಸಿಗದೆ ನರಕಯಾತನೆಯ ಬದುಕು ನಮ್ಮದು. ನಮ್ಮನ್ನು ಆಳುವವರಿಗೆ ಆಳುವ ಮುನ್ನ ಆಳುವಂತಾಗಿಸಲು ನಾವೆ ಬೇಕು. ಆದರೆ ಆಳುವ ಸಮಯದಲ್ಲಿ ನಮ್ಮ ನೆನಪು ಇಷ್ಟು ವರ್ಷವಾದರೂ ಬಂದಿಲ್ಲವಲ್ಲ ಯಾಕೆ?. ಅಬ್ಬಬ್ಬಾ ಅಂದ್ರೆ ತಿಂಗಳಿಗೆ ಈಗಲೂ 2 ರಿಂದ 3 ಸಾವಿರ ಸಂಭಾವನೆಯನ್ನಷ್ಟೆ ಪಡೆಯುತ್ತೇವೆ ಎಂಬುವುದು ತಿಳಿದಿರಲಿಕ್ಕಿಲ್ಲವೆ. ಈಗ ತಿಳಿಯಿತ್ತಲ್ಲ, ಓಕೆ ನೋಡೋಣ.
ಸ್ವಸ್ಥ ಸಮಾಜಕ್ಕಾಗಿ ಪಣ ತೊಡುವ ತಾಲೂಕು ವರದಿಗಾರರಿಗೆ ಜೀವನ ಭದ್ರತೆಯ ಅನಿವಾರ್ಯತೆಯಿದೆ:
ಸಮಾಜ ಸ್ವಸ್ಥತೆಗಾಗಿ, ಸಮಾಜದ ಉನ್ನತಿಗಾಗಿ ಸಮಾಜಘಾತುಕರನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಇಂಥಹ ಸಂದರ್ಭಗಳಲ್ಲಿ ಅದೇಷ್ಟೊ ತಾಲೂಕುಮಟ್ಟದ ವರದಿಗಾರರು ಸಾವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಅನೇಕ ವರದಿಗಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ಅಪತ್ತಿಗೆ ಒಳಗಾಗಿ ಸಾವಿಗೀಡಾದ ವರದಿಗಾರನ ಮಡದಿ ತನ್ನ ಮಕ್ಕಳ ಬದುಕಿಗಾಗಿ ಇನ್ನೊಬ್ಬರ ಮನೆಯ ಮುಸುರೆ ತಿಕ್ಕಬೇಕಾದ ಸ್ಥಿತಿ ಬರುವಂತಾಗಿದೆ. ಹೀಗಿರುವಾಗ ಸರಕಾರ ತಾಲೂಕು ಮಟ್ಟದ ವರದಿಗಾರರುಗಳ ಜೀವನ ಭದ್ರತೆಯ ಬಗ್ಗೆ ಸುಯೋಗ್ಯ ಯೋಜನೆಗಳನ್ನು ಅನುಷ್ಟಾನ ಮಾಡಬೇಕಾಗಿದೆ. ಕನಿಷ್ಟ ಕೂಲಿ ಕಾರ್ಮಿಕರಿಗಿಂತಲೂ ಕಡೆಯಾಗಿ ಸಂಪಾದನೆಯನ್ನು ಹೊಂದಿರುವ ತಾಲೂಕು ಮಟ್ಟದ ವರದಿಗಾರರಿಗೆ ಗೌರವಯುತವಾದ ಪಿಂಚಣಿಯನ್ನು ಕೊಡಬೇಕಾಗಿದೆ. ಸ್ವಂತ ಮನೆ, ಜಾಗವಿಲ್ಲದ ವರದಿಗಾರರಿಗೆ ಅವರ ಕಾರ್ಯಕ್ಷೇತ್ರದಲ್ಲಿ ಜಾಗ ನೀಡಿ ಸ್ವಂತ ಮನೆ ನಿರ್ಮಿಸಲು ಆರ್ಥಿಕ ಸಹಾಯ ನೀಡಬೇಕಾಗಿದೆ. ವರದಿಗಾರರ ಮಕ್ಕಳ ಶಿಕ್ಷಣ, ಮದುವೆಗೆ ಆರ್ಥಿಕ ನೆರವು ನೀಡಬೇಕಾಗಿದೆ. ಬಸ್, ರೈಲ್ವೆ ಗಳಲ್ಲಿ ಸಂಚಾರಿಸಲು ರಿಯಾಯಿತಿ ಪಾಸ್ ನೀಡಬೇಕಾಗಿದೆ. ಆರೋಗ್ಯ ವಿಮೆ ಹಾಗೂ ವರದಿಗಾರನ ಕುಟುಂಬಸ್ಥರಿಗೆ ಆರೋಗ್ಯ ನಿಧಿಯನ್ನು ಸ್ಥಾಪಿಸಬೇಕಾಗಿದೆ. ದಿನಪತ್ರಿಕೆಗಳು ವರದಿಗಾರರನ್ನು ಚೆನ್ನಾಗಿ ನೋಡಿಕೊಳ್ಳುವಂತಾಗಲೂ ದಿನಪತ್ರಿಕೆಯ ಮುದ್ರಣಕ್ಕೆ ಅಗ್ಗದ ದರದಲ್ಲಿ ಪೇಪರ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ದಿನಪತ್ರಿಕೆಗಳ ಖರ್ಚು ವೆಚ್ಚಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಇನ್ನಾದರೂ ಯೋಚಿಸಿತೆ. ಯೋಚಿಸಬೇಕು.  ಇನ್ನೊಬ್ಬರ ಬದುಕಿಗೆ ಸುಂದರ ಅರ್ಥ ಕೊಡುವ ನಮ್ಮ ಬದುಕಿಗೂ ಸುಭದ್ರವಾದ ಮತ್ತು ಸಂತೃಪ್ತಿಯನ್ನು ದಯಪಾಲಿಸಬೇಕಾಗಿದೆ.

 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...