Monday, May 20, 2019

ಛಲಬಿಡದೆ ಯಶಸ್ಸಿನ ಬೆನ್ನೇರಿದ ನನ್ನ ತಮ್ಮ ಗಂಗಾಧರ ತಳವಾರ
ಜನ್ಮದಿನದ ಸಂಭ್ರಮದಲ್ಲಿ ನನ್ನ ಮುದ್ದು ತಮ್ಮ
ಆತ ನನ್ನ ತಮ್ಮ ಎಂದು ಹೇಳಿಕೊಳ್ಳಲು ಅತೀವ ಆನಂದವಾಗುತ್ತಿದೆ. ನನಗ್ಯಾವತ್ತು ಅಣ್ಣನ ಸ್ಥಾನವನ್ನು ನೀಡಿ ಗೌರವಾದರಗಳಿಂದ ಆತ ನೋಡಿಕೊಂಡ ಬಗೆಯನ್ನು ಮಾತ್ರ ನನ್ನಿಂದ ವರ್ಣಿಸಲು ಅಸಾಧ್ಯ. ಅತ್ಯಂತ ಚುರುಕಿನ ವ್ಯಕ್ತಿತ್ವದ ಕ್ರಿಯಾಶೀಲ ಯುವಕ ನನ್ನ ಮನದೊಳಗಿನ ಪ್ರೀತಿಯ ತಮ್ಮನ ಬಗ್ಗೆ ಒಂದೆರಡು ಅಕ್ಷರಗಳ ಗುಂಪನ್ನು ಬಿಡಿಸಿಡಬೇಕೆಂದು ಗಡಿಬಿಡಿಯ ನಡುವೆ ಹಂಬಲಿಸಿ ಬಿಡಿಸಲು ಹೊರಟಿದ್ದೇನೆ.
ಆತ ಯಾರು? ಎಂಬ ನಿಮ್ಮ  ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಇನ್ನೊಬ್ಬರ ಕಷ್ಟಕ್ಕೆ ತನ್ನ ಇಷ್ಟವನ್ನು ಮರೆತು, ಸ್ವಾರ್ಥವನ್ನು ಬಿಟ್ಟು ಓಡೋಡಿ ಧಾವಿಸುವ ಚಿನಕುರುಳಿ ವ್ಯಕ್ತಿತ್ವದ ಈ ಯುವಕ ಬೇರೆ ಯಾರು ಅಲ್ಲ. ನಾನು ಹೆಮ್ಮೆ ಪಡುವ ಯಶಸ್ವಿ ಜೀವನ ಸಾಧಕ ಗಂಗಾಧರ ತಳವಾರ. ಅಂದ ಹಾಗೆ ಕೇಂದ್ರದ ರೈಲ್ವೆ ಇಲಾಖೆಯ ದಕ್ಷಿಣ ಭಾರತ ರೈಲ್ವೆ ವಲಯದಲ್ಲಿ ಪ್ರಾಮಾಣಿಕ ಸೇವೆಗೈಯುತ್ತಿರುವ ಗಾಂಧಿನಗರದ ಕಣ್ಮಣಿ ಈತ ಎಂಬುವುದನ್ನು ಹೇಳಲು ನಾನ್ಯಕೆ ಹಿಂಜರಿಯಲಿ ಅಲ್ವೆ.

 
ಅದೀರಲಿ. ನನ್ನೊಳವಿನ ಗಂಗ್ಯಾ ಅಂದ್ರೆ ಗಂಗಾಧರ ತಳವಾರನಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಸಂಭ್ರಮ ಸಡಗರದಲ್ಲಿರುವ ಗಂಗ್ಯಾ ನಿನಗೆ ಮನದಾಳದ ಹಾರ್ದಿಕ ಶುಭಾಶಯಗಳು. ಜೀವನದಲ್ಲಿ ಮೊದಲ ಬಾರಿಗೆ ತಂದೆಯಾಗಿ ಜನ್ಮದಿನವನ್ನು ಆಚರಿಸುವ ಭಾಗ್ಯವನ್ನು ಕಂಡ ಗಂಗಾಧರನಿಗೆ ಜೀವನದಲ್ಲಿ ಉನ್ನತಿಯನ್ನು ಪ್ರಾಪ್ತಿಸಲಿ ಎಂಬ ಆಶಯದೊಂದಿಗೆ ಮಗದೊಮ್ಮೆ ಶುಭ ಹಾರೈಕೆಗಳು.
 
ಅಲ್ಲಿ ಇಲ್ಲಿ ಎಂದು ಓಡಾಡುತ್ತಿದ್ದ ವೇಗದ ಯುವಕ ಗಂಗಾಧರ ಈತ ನಮ್ಮ ಗಾಂಧಿನಗರದ ಹಿರಿಯರು ಹಾಗೂ ವಾಲ್ಮೀಕಿ ಸಮಾಜದ ಪ್ರಮುಖರು ಆಗಿರುವ ಬೋರಪ್ಪ ತಳವಾರ ಅವರ ಮೂರು ಜನ ಮಕ್ಕಳಲ್ಲಿ ಒಬ್ಬ. ಮೊದಲನೆಯವರು ಅಣ್ಣ, ಆನಂತರ ಅಕ್ಕ, ಕೊನೆಯವನು ಈ ನಮ್ಮ ರಸಗುಲ್ಲ ಗಂಗ್ಯಾ ಎಂದು ಹೇಳಬೇಕೆಂದಿಲ್ಲ.
 
ದಾಂಡೇಲಿಯ ಆದರ್ಶ ಶಾಲೆ, ಪರಿಜ್ಞಾನಾಶ್ರಮ ಶಾಲೆ, ಬಂಗೂರನಗರ ಶಾಲೆಯಲ್ಲಿ ಪ್ರಾಥಮಿಕ, ಜೆವಿಡಿಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು, ಆ ಬಳಿಕ ಅಲ್ಲಿ ಇಲ್ಲಿ ಎಂದು ಕಂಪ್ಯೂಟರ್ ಶಿಕ್ಷಣವನ್ನು ಪಡೆದುಕೊಂಡಿದ್ದ ಗಂಗಾಧರ ಕಲಿತ ವಿದ್ಯೆ ಹಾಳಾಗದಿರಲೆಂದು ಅವರಿವರ ಬಳಿ ಕಂಪ್ಯೂಟರ್ ಕೆಲಸ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡಿದ್ದ. ಇದರ ನಡುವೆಯೂ  ಬಿ.ಕಾಂ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದ ಧನ್ಯತೆ ನಮ್ಮ ಗಂಗ್ಯಾನಿಗಿದೆ. ಆನಂತರ ಸರಕಾರದ ವಿವಿಧ ಉದ್ಯೋಗಗಳಿಗೆ ಸಾಲು ಸಾಲು ಅರ್ಜಿ ಹಾಕುತ್ತಿದ್ದ ಗಂಗಾಧರನಿಗೆ ಕಳೆದ ಕೆಲ ವರ್ಷಗಳ ಹಿಂದೆ ಆತನ ಛಲಬಿಡದ ಪರಿಶ್ರಮದ ಫಲವಾಗಿ ದಕ್ಷಿಣ ಭಾರತ ರೈಲ್ವೆ ವಲಯದಲ್ಲಿ ಉದ್ಯೋಗ ಪ್ರಾಪ್ತಿಯಾಯಿತು.
 
ಈ ಉದ್ಯೋಗದಿಂದ ಬದುಕು ಬದಲಾಯಿತಾದರೂ, ಗಂಗ್ಯಾನ ಮನಸ್ಸು, ಗುಣ, ಪ್ರೀತಿ, ಆತ್ಮೀಯತೆ ಎಂದೂ ಬದಲಾಗಲಿಲ್ಲ ಎನ್ನುವುದು ಗಂಗಾಧರ ಜೀವನಯೋಗ್ಯತೆಗೆ ಹೆಮ್ಮೆಯಿಂದ ನೀಡಬಹುದಾದ ಬಹುದೊಡ್ಡ ಪಟ್ಟ ಎಂದು ಹೇಳಲು ಒಂದಿಂಚು ಸಂಕೋಚಪಡಲಾರೆ. ಹೃದಯವಂತಿಕೆ, ಗುಣವಂತಿಕೆಯಲ್ಲಿ ನನ್ನನ್ನು ಮೀರಿ ಬೆಳೆದ ಗಂಗಾಧರ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡುವ ಸಮಯ ಸನಿಹದಲ್ಲಿದೆ ಎಂದು ಭಾವಿಸಿದವ ನಾನು. 
 
ತಾನಷ್ಟೆ ಬದುಕುವುದಲ್ಲ, ತನ್ನ ಜೊತೆ ಇನ್ನೊಬ್ಬರ ಬದುಕಿಗೂ ನೆರವಾಗಬೇಕೆಂಬ ಮಾನವೀಯ ಸಹೃದಯವನ್ನು ಹೊತ್ತ ಗಂಗಾಧರ ಅಪ್ಪ, ಅಮ್ಮನಿಗೆ ಮುದ್ದಿನ ಮಗನಾಗಿ, ಅಕ್ಕ ಮತ್ತು ಅಣ್ಣನಿಗೆ ಅಕ್ಕರೆಯ ತಮ್ಮನಾಗಿ, ಪ್ರೀತಿಸಿ, ಮುದ್ದಿಸಿ ವರಿಸಿದ ಮಡದಿಗೆ ಮುದ್ದಿನ ಸಂಗಾತಿಯಾಗಿ, ಪುಟ್ಟ ಕಂದನಿಗೆ ಹೆಮ್ಮೆಯ ತಂದೆಯಾಗಿ, ಸಹಸ್ರ್ರಾರು ಗೆಳೆಯರಿಗೆ ಮಿಡುವ ಜೀವವಾಗಿರುವ ಗಂಗಾಧರ ನೀನು ನನ್ನ ಮನದೊಳಗಿನ ಹೃದಯದ ತಮ್ಮ ಎಂದು ಹೇಳಲು ಅಭಿಮಾನದ ಜೊತೆಗೆ ಬಿಗುಮಾನವಿದೆ.
 
ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಗಂಗಾಧರನ ಪರಿಶ್ರಮದ ಜೀವನ ಜೈತ್ರಾ ಯಾತ್ರೆಗೆ ಸತ್ಪುರುಷ ದಾಂಡೇಲಪ್ಪನ ಅನುಗ್ರಹ ಸದಾ ಇರಲಿ. ಜೀವನದಲ್ಲಿ ಆರೋಗ್ಯ, ಸಮೃದ್ದಿ, ನೆಮ್ಮದಿ ನನ್ನ ಗಂಗಾಧರನ ಆಸ್ತಿಯಾಗಲೆಂದು ಹಾರೈಸುತ್ತೇನೆ.
 
ಶುಭವಾಗಲಿ, ಬಾಳು ಬೆಳಕಾಗಲಿ.

ನಿಮ್ಮವ
 
ಸಂದೇಶ್.ಎಸ್.ಜೈನ್

 

1 comment:

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...